alex Certify ಜನರಿಗೆ ಸ್ಪಂದಿಸುವುದು ಬಿಟ್ಟು ದೇವೇಗೌಡರ ಕುಟುಂಬದ ಬಗ್ಗೆ ಮಾತೇಕೆ…? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಉದಾಹರಣೆ ಸಹಿತ ಬಿಜೆಪಿಗೆ ಹೆಚ್.ಡಿ.ಕೆ. ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರಿಗೆ ಸ್ಪಂದಿಸುವುದು ಬಿಟ್ಟು ದೇವೇಗೌಡರ ಕುಟುಂಬದ ಬಗ್ಗೆ ಮಾತೇಕೆ…? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಉದಾಹರಣೆ ಸಹಿತ ಬಿಜೆಪಿಗೆ ಹೆಚ್.ಡಿ.ಕೆ. ತರಾಟೆ

ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. ‘ಬಿಜೆಪಿ ಎಂಬ ಬುರುಡೆ ಪಾರ್ಟಿ ‘ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸ್ಮಾರ್ಟ್ ಸಿಟಿ ನಡೆಯಲಿದೆ ಎಂದು ಹೊರಟವರು ಕೆಂಪೇಗೌಡರು ಕಟ್ಟಿದ ಭವ್ಯ ಬೆಂಗಳೂರು ನಗರವನ್ನು ಈಜು ಕೊಳ ಮಾಡುತ್ತಿದ್ದಾರೆ. ರಸ್ತೆಗಳು ರಾಜ ಕಾಲುವೆಗಳಾಗಿ, ಮನೆಗಳು ಕೆರೆ ಬಾವಿಗಳಾಗಿವೆ ಎಂದು ಟೀಕಿಸಿದ್ದಾರೆ.

ಈ ತಿಂಗಳ 13ನೇ ತಾರೀಖು ಮುಗಿದ ಜಲಧಾರೆ ಸಮಾರೋಪ ಸಮಾವೇಶದ ಬಗ್ಗೆ ಆರು ದಿನ ಅಧ್ಯಯನ ಮಾಡಿ ಟ್ವೀಟ್ ಮಾಡಿದೆ ಬಿಜೆಪಿ. ಇನ್ನು ಆರಂಭದ ಪಂಚರತ್ನ ಯಾತ್ರೆ ಬಗ್ಗೆ ಆಗಲೇ ಏರಿದೆ ಬೀಪಿ. ಮಿಷನ್ 123 ನಮ್ಮ ಗುರಿ. ನಿಮಗೆ ಯಾಕೆ ಉರಿ ಎಂದು ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಬಿಜೆಪಿಯಲ್ಲಿ 1+2 / 1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಅದರ ಗರ್ಭಗುಡಿಯಲ್ಲಿ 1+2 / 1+2+3ಗಳ ಕುಟುಂಬ ಶಿಶುಗಳೇ ತುಂಬಿವೆ. ಯಡಿಯೂರಪ್ಪ, ಶೆಟ್ಟರ್, ನಿರಾಣಿ, ಜಾರಕಿಹೊಳಿ, ಜೊಲ್ಲೆ; ಒಂದಾ.. ಎರಡಾ? ಪಟ್ಟಿ ಮಾಡುತ್ತಾ ಹೋದರೆ ಅದೇ ಹನುಮನ ಬಾಲ. ಈಗ ಬಿಜೆಪಿಗರು ಹೇಳಬೇಕು, 1+2 / 1+2+3 ಇರುವುದು ಎಲ್ಲಿ? ಈ ವಿಷಯದಲ್ಲಿ ಬಿಜೆಪಿಯದ್ದು ರಾಷ್ಟ್ರೀಯ ದಾಖಲೆ ಎಂದು ಟೀಕಿಸಿದ್ದಾರೆ.

ಕುಟುಂಬವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಬ್ರಿಟಿಷರ ಬಚ್ಚಲು ಬಾಚಿದ ಅವರಿಗೆ ತಮ್ಮ ಕಪಟಕ್ಕೆ ವಿರುದ್ಧವಾದ ರಾಷ್ಟ್ರೀಯವಾದವು ಎಂಬ ಏಣಿ ಹತ್ತಿ ತಾನು ರಕ್ಕಸರೂಪ ತಾಳಿದ್ದು ಮರೆತಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್ ನಲ್ಲಿ ಪಂಚರತ್ನಗಳಿವೆ, ನಿಜ. ಬಿಜೆಪಿಯಲ್ಲಿ ಸೀಡಿರತ್ನಗಳು, 40% ಕಮಿಷನ್ ರತ್ನಗಳು, ಜನರ ಹಣದ ಲೂಟಿ ರತ್ನಗಳು, ಕಾಸಿಗಾಗಿ ಕೆಲಸ ಮಾರಿಕೊಳ್ಳುವ ರತ್ನಗಳು, ಪಿಎಸ್ಐ ಕಿಂಗ್ ಪಿನ್ ರತ್ನಗಳು, ಮಾಧ್ಯಮಗಳ ವಿರುದ್ಧ ಕೋರ್ಟ್ ಸ್ಟೇಟ್ ತಂದ ರತ್ನಗಳು, ಸದನದಲ್ಲೇ ನೀಲಿಚಿತ್ರ ನೋಡಿದ ರತ್ನಗಳು ಕೂಡ ಇವೆ. ಅಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.

123 ನಮ್ಮ ಗುರಿ. ನಮ್ಮ ಹೋರಾಟ ನಮ್ಮದು. ಬಿಜೆಪಿಗೆ ಇಲ್ಲಿ ಒಂದು ಸೀಟು ಗೆಲ್ಲಬೇಕಾದರೂ ಮೋದಿಯೇ ಗತಿ. 123 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಮಾತು ಹಾಗಿರಲಿ. ನಿಮಗಿದ್ದಾರಾ? ಅಭ್ಯರ್ಥಿಗಳಿಗೆ ದಿಕ್ಕಿಲ್ಲದೆ, ಅಕ್ಕಪಕ್ಕದ ಪಕ್ಷಗಳ ನಾಯಕರ ಮನೆ ಬಾಗಿಲ ನೆಲ ನೆಕ್ಕುವ ನೀವು ನಮ್ಮ ಬಗ್ಗೆ ಮಾತನಾಡುತ್ತೀರಿ. ಜನತಾ ಪರಿವಾರ ದೇವೇಗೌಡ ಆಂಡ್ ಸನ್ಸ್ ಅನ್ನುವವರ ಕಣ್ಣುಗಳಿಗೆ ಕಾಮಾಲೆಯಾ? ಬಿಜೆಪಿಯಲ್ಲಿರುವ ಸನ್ಸ್, ಬ್ರದರ್ಸ್ ಮತ್ತು ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಕುರುಡಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ & ಸನ್ಸ್, ಶೆಟ್ಟರ್ -ನಿರಾಣಿ & ಬ್ರದರ್ಸ್, ಜೊಲ್ಲೆ & ಹಸ್ಬೆಂಡ್, ಉದಾಸಿ & ಸನ್ಸ್, ಜಾರಕಿಹೊಳಿ ಮತ್ತು ಬ್ರದರ್ಸ್, ಲಿಂಬಾವಳಿ ಭಾವ ಬಾಮೈದ, ಅಂಗಡಿ ಮತ್ತು ಕುಟುಂಬ, ಬಸವರಾಜು ಅಂಡ್ ಸನ್, ಕತ್ತಿ ಅಂಡ್ ಬ್ರದರ್ಸ್, ಅಪ್ಪಚ್ಚು ರಂಜನ್ ಅಂಡ್ ಬ್ರದರ್. ಕೊನೆಗೆ, ಬಳ್ಳಾರಿಯ ರೆಡ್ಡಿ ಬ್ರದರ್ಸ್, ಶ್ರೀರಾಮುಲು ಮತ್ತು ಸಿಸ್ಟರ್…ಪಟ್ಟಿ ಸಾಕಾ? ಇನ್ನೂ ಬೇಕಾ? ದಿಲ್ಲಿಯಿಂದ ಹಳ್ಳಿ ತನಕ ಕುಟುಂಬ ರಾಜಕಾರಣದ ಕೊಳದಲ್ಲಿ ಬಿಜೆಪಿ ಮಿಂದೇಳುತ್ತಿರುವುದು ಸುಳ್ಳಾ? ನನ್ನನ್ನು ಲಕ್ಕಿ ಡಿಪ್ ಸಿಎಂ ಎನ್ನುವ ಬಿಜೆಪಿಗೆ, ತನ್ನೆಲ್ಲ ಸಿಎಂ ಆಪರೇಷನ್ ಕಮಲದ ಕೆಸರಿನಲ್ಲಿ ಡಿಪ್ ಆದವರಿಗೆ ಗೊತ್ತಿಲ್ಲವೇ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...