alex Certify BIG NEWS: ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿದ್ದತೆ; ಗಜನಗರ ಅಥವಾ ಹರನಂದಿ ನಗರ ಎಂದು ಹೆಸರಿಡಲು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿದ್ದತೆ; ಗಜನಗರ ಅಥವಾ ಹರನಂದಿ ನಗರ ಎಂದು ಹೆಸರಿಡಲು ಚರ್ಚೆ

Ghaziabad, Gajnagar, or Harnandi Nagar: Municipality considers name change

ಉತ್ತರಪ್ರದೇಶದ ಗಾಜಿಯಾಬಾದ್ ಅನ್ನು ಗಜನಗರ ಅಥವಾ ಹರನಂದಿ ನಗರ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದೂ ಸಂಘಟನೆಗಳ ಬೇಡಿಕೆಯಂತೆ ಮೊದಲ ಬಾರಿಗೆ ಜಿಲ್ಲೆಯ ಹೆಸರು ಬದಲಾವಣೆಗೆ ಮಹಾನಗರ ಪಾಲಿಕೆಯ ಸಭೆಯ ಕಾರ್ಯಸೂಚಿಯಲ್ಲಿ ಪ್ರಸ್ತಾವನೆ ಇಟ್ಟಿದ್ದು 2 ಹೆಸರಿನ ಆಯ್ಕೆಗಳನ್ನು ನೀಡಲಾಗಿದೆ.

ಎನ್‌ಸಿಆರ್ ಜಿಲ್ಲೆಗೆ ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಬಿಜೆಪಿ ಕೌನ್ಸಿಲರ್ ಸೋಮವಾರ ಮಂಡಿಸಿದ್ದು, ಅದನ್ನು ಅಜೆಂಡಾಕ್ಕೆ ಸೇರಿಸಲಾಗಿದೆ. ಜಿಲ್ಲೆಗೆ ಹೊಸ ಹೆಸರಿನ ಪ್ರಸ್ತಾಪದ ಕುರಿತು ಗಾಜಿಯಾಬಾದ್ ಮೇಯರ್ ಸುನಿತಾ ದಯಾಳ್ ಮಾತನಾಡಿ, ಮರುನಾಮಕರಣದ ಬಗ್ಗೆ ಹಲವು ದಿನಗಳಿಂದ ಮನವಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು. ಆದರೆ ಈ ವಿಷಯವನ್ನು ಪಾಲಿಕೆ ಸಭೆಯ ಮಟ್ಟದಲ್ಲಿ ಚರ್ಚಿಸಿದ್ದು ಇದೇ ಮೊದಲು ಎಂದು ಅವರು ತಿಳಿಸಿದರು.

2018 ರಲ್ಲಿ ಅಲಹಾಬಾದ್ ಗೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಿದ ಬಳಿಕ ಗಾಜಿಯಾಬಾದ್ ಹೆಸರನ್ನು ಬದಲಾಯಿಸುವ ಕೂಗು ಹೆಚ್ಚಾಯಿತು. ವಾರ್ಡ್ ಸಂಖ್ಯೆ 100ರ ಬಿಜೆಪಿ ಕೌನ್ಸಿಲರ್ ಸಂಜಯ್ ಸಿಂಗ್ ಅಧಿಕೃತವಾಗಿ ಪ್ರಸ್ತಾವನೆ ಮಂಡಿಸಿದರು. “ಮಂಡಳಿಯು ನನ್ನ ಪ್ರಸ್ತಾವನೆಯನ್ನು ಅಂಗೀಕರಿಸಿದೆ ಮತ್ತು ಅದರ ಬಗ್ಗೆ ಚರ್ಚೆ ನಡೆಸಲಿದೆ. ಪ್ರಾಥಮಿಕವಾಗಿ ನಾನು ಗಜನಗರ ಮತ್ತು ಹರನಂದಿ ನಗರ ಎರಡು ಹೆಸರುಗಳನ್ನು ಪ್ರಸ್ತಾಪಿಸಿದ್ದೇನೆ. ಗಾಜಿಯಾಬಾದ್ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ನಗರವು ಅದರ ಸರಿಯಾದ ಸ್ಥಾನವನ್ನು ಪಡೆದುಕೊಳ್ಳಲು ಇದು ಸಕಾಲವಾಗಿದೆ.” ಎಂದು ಅವರು ಹೇಳಿದರು. ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತವಿದ್ದು ಈ ಬಗ್ಗೆ ನಿರ್ಣಯ ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ.

ನಗರಕ್ಕೆ ಹೆಸರು ಬದಲಾಯಿಸುವ ಪ್ರಯತ್ನಗಳ ಮುಂಚೂಣಿಯಲ್ಲಿ ದೂಧೇಶ್ವರನಾಥ ದೇವಾಲಯದ ಪ್ರಧಾನ ಅರ್ಚಕ ಮಹಂತ್ ನಾರಾಯಣ ಗಿರಿ 2022 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. “ನಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದರು. ಗಾಜಿಯಾಬಾದ್‌ಗೆ ಗಜಪ್ರಸ್ಥ, ದೂದೇಶ್ವರತ್ ನಗರ ಅಥವಾ ಹರನಂದಿಪುರಂ ಎಂದು ಹೆಸರಿಸಬೇಕೆಂದು ನಾನು ಸೂಚಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಈ ಮೂರು ಹೆಸರುಗಳೇ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಹಾಭಾರತದಲ್ಲಿ ಇಂದಿನ ಗಾಜಿಯಾಬಾದ್ ಪ್ರದೇಶವು ಒಂದು ಕಾಲದಲ್ಲಿ ಹಸ್ತಿನಾಪುರದ ಭಾಗವಾಗಿತ್ತು, ಇದು ಅರಣ್ಯ ಪ್ರದೇಶವಾಗಿತ್ತು ಮತ್ತು ಆನೆಗಳಂತಹ ಅನೇಕ ಕಾಡು ಪ್ರಾಣಿಗಳಿಗೆ ನೆಲೆಯಾಗಿತ್ತು. ಗಜ್ ಎಂದರೆ ಆನೆ, ಗಜಪುರ ಅಥವಾ ಗಜನಗರ ಎಂಬ ಹೆಸರು ಸೂಕ್ತವಾಗಿರಬಹುದು. ಎಂದು ಹೇಳಿದರು.

ಹರನಂದಿ ನಗರ ಎಂಬ ಹೆಸರಿನ ಬಗ್ಗೆ ಉಲ್ಲೇಖಿಸುತ್ತಾ ನಗರದ ಹಿಂದೆ ಹರಿಯುವ ಹಿಂಡನ್ ನದಿಯನ್ನು ಸೂಚಿಸುತ್ತದೆ ಎಂದು ಗಿರಿ ಹೇಳಿದರು. ಗಾಜಿಯಾಬಾದ್ ತನ್ನ ಹೆಸರನ್ನು ಹೇಗೆ ಕಂಡುಕೊಂಡಿತು ಎಂದರೆ, ಗೆಜೆಟಿಯರ್‌ಗಳ ಪ್ರಕಾರ, 1739 ರಲ್ಲಿ ಇರಾನ್‌ನ ನಾದಿರ್ ಷಾ ದೇಶದ ಮೇಲೆ ದಾಳಿ ಮಾಡಿ ದೆಹಲಿಯನ್ನು ವಶಪಡಿಸಿಕೊಂಡು ನೆರೆಯ ಜಿಲ್ಲೆಗಳಲ್ಲಿ ದಾಳಿ ಮುಂದುವರೆಸಿದ್ದ. 1740 ರಲ್ಲಿ ಗಾಜಿ-ಉದ್-ದಿನ್, ಘಜಿಯುದ್ದೀನ್ ನಗರವನ್ನು ಸ್ಥಾಪಿಸಿದ. ಬ್ರಿಟಿಷರು 1864 ರಲ್ಲಿ ರೈಲುಮಾರ್ಗ ಆರಂಭಿಸುವುದರೊಂದಿಗೆ ಇದನ್ನು ಗಾಜಿಯಾಬಾದ್ ಎಂದು ಕರೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...