ಗುವಾಹಟಿ: ಗುವಾಹಟಿಯಲ್ಲಿ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಸಂಜಿಬ್ ತಾಲೂಕ್ದಾರ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಕ್ಕಾಗಿ ಚಿನ್ನದ ಪದಕ ಪಡೆದಿದ್ದಾರೆ. ಅಸ್ಸಾಂ ರಾಜ್ಯಪಾಲರು ಈತನಿಗೆ ಪದಕ ಪ್ರದಾನ ಮಾಡಿದರು.
2019 ರ ಗುವಾಹಟಿ ಸ್ಫೋಟದ ಶಂಕಿತರಲ್ಲಿ ಸಂಜಿಬ್ ತಾಲೂಕ್ದಾರ್ ಪ್ರಮುಖ ಆರೋಪಿ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದರು. ಜೈಲಿನಲ್ಲಿರುವಾಗ ಕೃಷ್ಣ ಕಾಂತಾ ಹ್ಯಾಂಡಿಕ್ ಸ್ಟೇಟ್ ಓಪನ್ ಯೂನಿವರ್ಸಿಟಿ (ಕೆಕೆಎಚ್ಎಸ್ಒಯು) ದಿಂದ ಮಾಸ್ಟರ್ ಆಫ್ ಆರ್ಟ್ಸ್ಗೆ ದಾಖಲಾಗಿದ್ದು ಅದನ್ನು ಪೂರ್ಣಗೊಳಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಗುರುವಾರ ಗುವಾಹಟಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ಅವರು ಶೇ.71 ಅಂಕ ಗಳಿಸಿರುವ ಅಂಡರ್ ಟ್ರಯಲ್ ಗೆ ಚಿನ್ನದ ಪದಕ ಪ್ರದಾನ ಮಾಡಿದರು. ಮಾಧ್ಯಮದ ಜೊತೆ ಮಾತನಾಡಿದ ಸಂಜೀಬ್ ತಾಲೂಕ್ದಾರ್ ಸಹೋದರಿ ಡಾಲಿ, “ಇದು ನಮಗೆ ಮಿಶ್ರ ಭಾವನೆಯಾಗಿದೆ, ಆತ ಚಿನ್ನದ ಪದಕವನ್ನು ಪಡೆದಿರುವುದು ಖುಷಿ ಹಾಗೂ ಈಗ ಜೈಲಿನಲ್ಲಿ ಇರುವುದು ಬೇಸರ” ಎಂದಿದ್ದಾರೆ.