ನವದೆಹಲಿ: ಲಂಚ ಕೇಳುತ್ತಿದ್ದ ಆರೋಪದ ಮೇಲೆ ಇಬ್ಬರು ಮುಖ್ಯ ಪೇದೆಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಬಂಧಿಸಿದೆ. ಆ ನಂತರ ದೊಡ್ಡ ಹೈಡ್ರಾಮವೇ ನಡೆದಿದೆ.
ಲಂಚ ಪಡೆದ ಆರೋಪದ ಮೇಲೆ ದೆಹಲಿಯ ಇಬ್ಬರು ಹೆಡ್ ಕಾನ್ಸ್ಟೇಬಲ್ಗಳನ್ನು ಸಿಬಿಐ ಬಂಧಿಸಲು ಮುಂದಾಗಿದೆ. ಈ ವೇಳೆ ಒಬ್ಬ ಪೇದೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿರುವ ಘಟನೆ ನಡೆದಿದೆ. ಓಡಿ ಹೋಗಲು ಯತ್ನಿಸಿದ ಪೇದೆಯನ್ನು ಸಿಬಿಐ ಅಧಿಕಾರಿಯೊಬ್ಬರು ಬಗ್ಗುಬಡಿದಿದ್ದಾರೆ.
ಲಂಚ ಪಡೆದ ಆರೋಪಿಗಳನ್ನು ಭೀಮ್ ಮತ್ತು ಅಕ್ಷಯ್ ಎಂದು ಗುರುತಿಸಲಾಗಿದ್ದು, ಮಂಗೋಲ್ಪುರಿ ಪ್ರದೇಶದಲ್ಲಿ ಇ-ರಿಕ್ಷಾ ಚಾರ್ಜಿಂಗ್ ಮತ್ತು ಪಾರ್ಕಿಂಗ್ಗೆ ಅನುಮತಿ ನೀಡುವ ಬದಲು ಅಕ್ರಮ ಪಾವತಿಗೆ ಬೇಡಿಕೆ ಇಟ್ಟಿದ್ದರು. ಇಬ್ಬರೂ ದೆಹಲಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ಗಳಾಗಿದ್ದು, ಪ್ರಸ್ತುತ ಮಂಗೋಲ್ಪುರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಜುಲೈ 10 ರಂದು ಲಂಚದ ಬಗ್ಗೆ ಸಿಬಿಐಗೆ ದೂರು ಬಂದಿತ್ತು. ದೆಹಲಿಯ ಮಂಗೋಲ್ಪುರಿಯಲ್ಲಿರುವ ಕೆ ಬ್ಲಾಕ್ನ ಎಲ್ಎಸ್ಸಿ ಮಾರ್ಕೆಟ್ನಲ್ಲಿರುವ ಇ-ರಿಕ್ಷಾ ಚಾರ್ಜಿಂಗ್ ಅಂಗಡಿಯನ್ನು ನಿರ್ವಹಿಸುವ ವ್ಯಕ್ತಿಯೊಬ್ಬರು ಈ ದೂರನ್ನು ದಾಖಲಿಸಿದ್ದರು.
ದೂರಿನ ಪ್ರಕಾರ, ಜುಲೈ 7 ರಂದು ಮಂಗೋಲ್ಪುರಿ ಪೊಲೀಸ್ ಠಾಣೆಯ ಭೀಮ್ ಎಂಬ ಹೆಡ್ ಕಾನ್ಸ್ಟೇಬಲ್ ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ದೂರುದಾರರ ಇ-ರಿಕ್ಷಾ ಚಾರ್ಜಿಂಗ್ ಅಂಗಡಿ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಅಂಗಡಿಯ ಮುಂಭಾಗದಲ್ಲಿರುವ ಇ-ರಿಕ್ಷಾಗಳನ್ನು ವಶಪಡಿಸಿಕೊಳ್ಳುವುದು ಬೆದರಿಕೆಯನ್ನು ಒಳಗೊಂಡಿತ್ತು. ಅಲ್ಲದೆ, ಲಂಚ ಕೊಡುವಂತೆ ಪೀಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳು 50,000 ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಡೀ ಘಟನೆ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.