alex Certify ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ: ಜಾತ್ರೆ, ಉರುಸು ರದ್ದು – ಮಾಸ್ಕ್ ಧರಿಸದವರಿಗೆ ದಂಡ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ: ಜಾತ್ರೆ, ಉರುಸು ರದ್ದು – ಮಾಸ್ಕ್ ಧರಿಸದವರಿಗೆ ದಂಡ ಕಡ್ಡಾಯ

ಧಾರವಾಡ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳ ವರದಿಯಲ್ಲಿ ಏರಿಕೆಯಾಗುತ್ತಿರುವುದು ಎರಡನೇ ಅಲೆಯ ಅಪಾಯವನ್ನು ಸೂಚಿಸುತ್ತದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಮುಂಬರುವ ಎಲ್ಲ ಜಾತ್ರೆ, ಉರುಸು ರದ್ದುಗೊಳಿಸಲಾಗಿದೆ.

ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮದುವೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ಕೋವಿಡ್ ನಿಯಂತ್ರಣದ ತಾಂತ್ರಿಕ ಮತ್ತು ತಜ್ಞರ ಸಲಹಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೋ ಸಂವಾದ ಮೂಲಕ ನಡೆಸಿದ ಸಭೆಯ ಬಳಿಕ ನೀಡಿದ ಸೂಚನೆಗಳನ್ನು ಆಧರಿಸಿ, ಜಿಲ್ಲಾಧಿಕಾರಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಈ ನಿರ್ದೇಶನಗಳನ್ನು ನೀಡಿದ್ದಾರೆ.

ಸೂಚನೆಗಳು:

ಕಳೆದ ವರ್ಷ ಈ ದಿನಗಳಲ್ಲಿ ಇದ್ದ ಕೋವಿಡ್-19ರ ಸ್ಥಿತಿಯೇ ಈಗ ಮತ್ತೆ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಹಾಗೂ ಲಸಿಕಾ ಕಾರ್ಯ ತೀವ್ರಗೊಳಿಸಬೇಕು.  ಜಿಲ್ಲೆಯ ಎಲ್ಲ ತಹಶೀಲ್ದಾರರು ಈ ನಿಟ್ಟಿನಲ್ಲಿ ಹೆಚ್ಚು ಎಚ್ಚರವಹಿಸಬೇಕು. ಭಾರತ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಆಚರಣೆಗಳು ಹಾಗೂ ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಗೆ 3.25 ಚದರ ಮೀಟರ್ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 500, ಒಳಾಗಂಣದಲ್ಲಿ 200 ಜನರಿಗೆ ಮಾತ್ರ ಅವಕಾಶವಿದೆ ಪೂರ್ವಾನುಮತಿ ಕಡ್ಡಾಯ. ಜನ್ಮದಿನ ಇತರ ಆಚರಣೆಗಳಿಗೆ, ನಿಧನ, ಶವಸಂಸ್ಕಾರ, ಅಂತ್ಯಕ್ರಿಯೆ, ಧಾರ್ಮಿಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಸಂಖ್ಯೆಗೆ ಸೀಮಿತಗೊಳಿಸಿ ಅವಕಾಶ ನೀಡಬೇಕು. ಮಾಸ್ಕ್ ಹಾಕದ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯವನ್ನು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಕೋಶ, ಗ್ರಾಮ ಪಂಚಾಯತಿಗಳು ಚುರುಕುಗೊಳಿಸಬೇಕು.

ಕೋವಿಡ್ ತಪಾಸಣೆ, ಲಸಿಕೆ ಕಡ್ಡಾಯ:

ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕಿತರು, ಅವರ ಸಂಪರ್ಕದ ವ್ಯಕ್ತಿಗಳನ್ನು ಪತ್ತೆಮಾಡಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ಮತ್ತೆ ತೀವ್ರವಾಗಬೇಕು. ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ತರಹದ ಲಸಿಕೆಗಳು ಲಭ್ಯವಿವೆ. ಸಾರ್ವಜನಿಕರು ತಮ್ಮ ಇಚ್ಛೆ ಅನುಸಾರ ಈ ಲಸಿಕೆಗಳನ್ನು ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಈ ಎರಡು ಲಸಿಕೆಗಳನ್ನು ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಡಂಗುರ ಸಾರಿ ಜನಜಾಗೃತಿ ಮೂಡಿಸಬೇಕು. ವಿವಿಧ ಯೋಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟವರು ಹಾಗೂ ಸರ್ಕಾರದ ನಿವೃತ್ತ ನೌಕರರು ಕಡ್ಡಾಯವಾಗಿದೆ ಎಂದರು.

 ಚುನಾವಣಾ ಕರ್ತವ್ಯ ಮಾದರಿಯಲ್ಲಿ ಕಾರ್ಯನಿರ್ವಹಣೆ:

60 ವರ್ಷ ಮೇಲ್ಪಟ್ಟ ಜಿಲ್ಲೆಯ ನಾಗರಿಕರನ್ನು ಗುರುತಿಸಲು ಚುನಾವಣಾ ಕರ್ತವ್ಯ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ವಿಧಾನ ಸಭಾ ಕ್ಷೇತ್ರ, ಮತಗಟ್ಟೆವಾರು ಚುನಾವಣಾ ಗುರುತಿನ ಚೀಟಿ ಆಧರಿಸಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಹಾಗೂ 45 ವರ್ಷ ಮೇಲ್ಪಟ್ಟ ಕೊ-ಮಾರ್ಬಿಡಿಟಿ ಲಕ್ಷಣಗಳಿರುವ ವ್ಯಕ್ತಿಗಳನ್ನು  ಗುರುತಿಸಿ ಲಸಿಕೆ ಪಡೆಯಲು ಸಹಕರಿಸಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ನೂಡಲ್ ಅಧಿಕಾರಿಗಳು ಹಾಗೂ ಮತಗಟ್ಟೆ ವ್ಯಾಪ್ತಿಯ ಪರಿಶೀಲನಾ ಅಧಿಕಾರಿಗಳನ್ನು ನೇಮಿಸಲಾಗಿದೆ.  ಈ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿದರೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...