alex Certify BIG NEWS: ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು? ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು? ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಕೋವಿಡ್ ಸಮಯದಲ್ಲಿ ಜನರು ಕಷ್ಟಕ್ಕೆ ಸಿಲುಕಿದ್ದಾಗ ಅವರ ಪರವಾಗಿ ನಿಂತಿದ್ದು ಡಿ.ಕೆ. ಸುರೇಶ್. ಇದು ಮಾನವೀಯತೆ, ಹೃದಯವಂತಿಕೆಯಲ್ಲವೇ? ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ಕುಮಾರಸ್ವಾಮಿ ಅವರ ವಿಚಾರ ಮಾತನಾಡಲು ಇಷ್ಟವಿಲ್ಲ. ಆದರೂ ಅವರಿಗೆ ಒಂದು ವಿಚಾರ ಕೇಳಬಯಸುತ್ತೇನೆ. ನೀವು ಈ ಜಿಲ್ಲೆಯ ಕ್ಷೇತ್ರವೊಂದರ ಶಾಸಕರು. ಕೋವಿಡ್ ಬಂದಾಗ ಈ ಭಾಗದ ಬಡವರ ರಕ್ಷಣೆಗೆ ನೀವು ಯಾರಾದರೂ ಒಬ್ಬರು ಮುಂದೆ ಬಂದರಾ? ಇಲ್ಲ.

ಆದರೆ, ಡಿ.ಕೆ ಸುರೇಶ್ ಅವರು ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥ, ಮೆಡಿಕಲ್ ಕಿಟ್ ವಿತರಿಸಿದರು. ರೈತರಿಗೆ ಮಾರುಕಟ್ಟೆ ಇಲ್ಲದಾಗ, ರೈತರು ಬೆಳೆದ ತರಕಾರಿಗಳನ್ನು ಅವರ ಜಮೀನಿನಿಂದ ಖರೀದಿ ಮಾಡಿದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತರಕಾರಿ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ಉಚಿತವಾಗಿ ಹಂಚಿದ್ದಾರೆ. ಆ ಮೂಲಕ ರೈತರು ಹಾಗೂ ಬಡವರನ್ನು ರಕ್ಷಣೆ ಮಾಡಿದ್ದಾರೆ ಎಂದರು.

ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಇನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಇದ್ದಾಗ, ಸುರೇಶ್ ಅವರು ತಾವೇ ಖುದ್ದಾಗಿ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಒಳಗೆ ಹೋಗಿ, ಸೋಂಕಿತರ ಸಮಸ್ಯೆ ಆಲಿಸಿದರು. ಅವರಿಗೆ ಧೈರ್ಯ ತುಂಬಿದರು. ಇದು ಮಾನವೀಯತೆ ಅಲ್ಲವೇ? ಇದು ಹೃದಯವಂತಿಕೆಯಲ್ಲವೇ? ಕುಮಾರಣ್ಣ ಆಗ ಎಲ್ಲಿ ಹೋಗಿದ್ದರು? ಅವರ ಅಭ್ಯರ್ಥಿ ಎಲ್ಲಿ ಹೋಗಿದ್ದರು? ಅವರ ಕುಟುಂಬ ಎಲ್ಲಿ ಹೋಗಿತ್ತು? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಕಷ್ಟಕಾಲದಲ್ಲಿ ಜನರಿಗೆ ಸಹಾಯ ಮಾಡಲು ಕುಮಾರಸ್ವಾಮಿ ಅವರಿಂದ ಆಗಲಿಲ್ಲ. ರಾಮನಗರದಲ್ಲಿರುವ ಆಸ್ಪತ್ರೆ ಕಟ್ಟಿಸಿದವರು ಯಾರು? ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಡಿ.ಕೆ. ಶಿವಕುಮಾರ್ ಕಟ್ಟಿಸಿದ್ದು. ಅಲ್ಲಮಪ್ರಭುಗಳು ಒಂದು ಮಾತು ಹೇಳುತ್ತಾರೆ. ಕೊಟ್ಟ ಕುದುರೆಯನು ಏರಲರಿಯದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಕುಮಾರಣ್ಣ ಅಧಿಕಾರ ಇಲ್ಲದಾಗ ಏನೂ ಮಾಡಲಿಲ್ಲ, ಅಧಿಕಾರ ಹೋದಾಗ ಏನು ಮಾಡುತ್ತೀರಿ? ಎಂದು ಗುಡುಗಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...