ಬೆಂಗಳೂರು: ಟೊಮೆಟೊಗೆ ಬಂಗಾರದ ಬೆಲೆ ಬಂದಿದ್ದ ಸಂದರ್ಭದಲ್ಲಿ ಸಾಲು ಸಾಲು ಟೊಮೆಟೊ ಕಳ್ಳತನ ಪ್ರಕರಣಗಳು ನಡೆದಿದ್ದವು. ಟೊಮೆಟೊ ಕಾಯುವುದೇ ಸವಾಲಿನ ಕೆಲಸವಾಗಿತ್ತು. ಈಗ ಎಳನೀರು ಸರದಿ… ರಸ್ತೆ ಬದಿ ಮಾರಾಟಕ್ಕಿಟ್ಟಿದ್ದ ಎಳನೀರಿಗೆ ಕಳ್ಳರ ಕಾಟ ಶುರುವಾಗಿದೆ.
1,500 ಎಳನೀರು ಕದ್ದು ವಾಹನದಲ್ಲಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೌತಮ್, ರಘು, ಮಣಿಕಂಠ ಬಂಧಿತ ಆರೋಪಿಗಳು. ಜಯನಗರ ಮೆಟ್ರೋ ನಿಲ್ದಾಣದ ಸಮೀಪ ರಸ್ತೆ ಬದಿ ಮಾರಾಟಕ್ಕಿಟ್ಟಿದ್ದ ಎಳನೀರನ್ನು ರಾತ್ರೋ ರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಕಳ್ಳರು, ಎಳನೀರು ಕದಿಯುತ್ತಿದ್ದರು.
ಟಾಟಾ ಏಸ್ ವಾಹನದ ನಂಬರ್ ಪ್ಲೇಟ್ ಗೆ ಮಸಿ ಬಳಿದುಕೊಂಡು ಬಂದು ಎಳನೀರು ಅಂಗಡಿ ದೋಚುತ್ತಿದ್ದರು. ಆಗಸ್ಟ್ 7ರದು ಎಳನೀರು ಅಂಗಡಿ ಮಾಲೀಕ, ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸು ಸಿಸಿಟಿವಿ ಆಧರಿಸಿ ಟಾಟಾ ಏಸ್ ವಾಹನ ಹೋದ ದಾರಿಯನ್ನು ಬೆನ್ನತ್ತಿದ್ದರು. 60ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದ್ದರು. ಆರೋಪಿಗಳು ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಟೀ ಕುಡಿದು ಆರೋಪಿಗಳು ಅಂಗಡಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಈ ಆಧಾರದಲ್ಲಿ ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂಬುದನ್ನು ಪರಿಶೀಲಿಸಿದ ಪೊಲೀಸರು, ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಬರೋಬ್ಬರಿ 15,000 ಎಳನೀರು ಕದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿ ರಘು ವಿರುದ್ಧ ಕೊಲೆಯತ್ನ ಕೇಸ್ ಕುಡ ಇದೆ ಎಂದು ತಿಳಿದುಬಂದಿದೆ.