ಬೆಂಗಳೂರು: ಅಯೋಧ್ಯೆಯಿಂದ ವಾಪಾಸ್ ಆಗುತ್ತಿದ್ದ ಯಾತ್ರಿಕರ ವಿಶೇಷ ರೈಲಿಗೆ ನುಗ್ಗಿ ಕಿಡಿಗೇಡಿಗಳು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣವನ್ನು ಸರ್ಕಾರ ತನಿಖೆಗೆ ವಹಿಸಬೇಕು ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಮ ಭಕ್ತರನ್ನು ಸುಟ್ಟುಹಾಕುವುದಾಗಿ ಮತಾಂಧ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಘಟನೆ ನಡೆದ ಕೂಡಲೇ ರಾಮ ಭಕ್ತರು ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೋ ಏನೋ ಆರೋಪಿ ತಪ್ಪಿಸಿಕೊಂಡು ಹೋಗಲು ಪೊಲೀಸರು ಬಿಟ್ಟಿದ್ದಾರೆ. ಪ್ರತಿಭಟನೆ ಮಾಡಿದ ಮೇಲೆ ಸಿಸಿಟಿವಿ ಆಧರಿಸಿ ಮತ್ತೆ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು. ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಬಿ.ಕೆ.ಹರಿಪ್ರಸಾದ್ ಮತ್ತೆ ಗೋಧ್ರಾ ಮಾದರಿಯ ಹತ್ಯೆ ಆಗುವಂತಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಅವರು ಸುಮ್ಮನೆ ಹೇಳಿಲ್ಲ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ನಾವು ಅವತ್ತೇ ಹೇಳಿದ್ದೆವು. ಹರಿಪ್ರಸಾದ್ ಹೇಳಿಕೆ ಹಾಗೂ ಈಗ ನಡೆದಿರುವ ಘಟನೆ ಕಾಕತಾಳೀಯವಲ್ಲ. ಹರಿಪ್ರಸಾದ್ ಅವರನ್ನು ವಿಚಾರಣೆ ನಡೆಸಬೇಕಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.