ಬೆಂಗಳೂರು : ಅಮೂಲ್ಯ ಜೀವಗಳನ್ನು ಉಳಿಸುವ ಅಂಗಾಂಗ ದಾನದ ಕುರಿತು ಕನ್ನಡಿಗರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಅಂಗಾಂಗ ನೋಂದಣಿ ಪ್ರಕ್ರಿಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನದ ಕುರಿತು ನಮ್ಮ ಇಲಾಖೆಯ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಫಲಶ್ರುತಿ ಎಂಬಂತೆ 2023ರಲ್ಲಿ ದಾಖಲೆಯ 178 ಮಂದಿ ಸ್ವಯಂ ಪ್ರೇರಿತರಾಗಿ ಅಂಗಾಗ ದಾನ ಮಾಡಿದ್ದು, ಕಳೆದ 15 ವರ್ಷಗಳಲ್ಲೇ ಇದು ದಾಖಲೆಯಾಗಿದೆ. ಇವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಂಗಾಂಗ ದಾನಿಗಳ ಪೈಕಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಓರ್ವ ವ್ಯಕ್ತಿ ಮಾಡುವ ಅಂಗಾಂಗ ದಾನದಿಂದ ಕನಿಷ್ಠ ಎಂಟು ಮಂದಿಯ ಜೀವ ಉಳಿಸಬಹುದು. ಮತ್ತೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಸಹಭಾಗಿಗಳಾಗಲು ಎಲ್ಲರಲ್ಲೂ ಮನವಿ ಮಾಡಿದ್ದಾರೆ.