ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನೆಲಮಂಗಲದಿಂದ ಹಾಸನಕ್ಕೆ ನಾಲ್ಕು ಪಥದ ರಸ್ತೆ ಮಾಡಿಸಿದ್ದು ಯಾರು? ಬೆಂಗಳೂರು-ಅರಸಿಕೆರೆ ರೈಲ್ವೆ ಯೋಜನೆ ಮಾಡಿದ್ದು ಯಾರು? ಈಗ ಯಾವುದೋ ಏರ್ ಪೋರ್ಟ್ ಯೋಜನೆ ಬಗ್ಗೆ ಮಾತಾಡ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸಿಎಂ ಆಗಿದ್ದಾಗ ಹಾಸನ ಕಾಲೇಜಿಗೆ ಕೊಟ್ಟ ಅನುದಾನವನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿದ್ದರು. ಇಂದು ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳಲು ಬಿಜೆಪಿ ಕಾರಣ. ನಾನು ಸಿಎಂ ಆಗಿದ್ದಾಗ 189 ಕಾಲೇಜು ಸ್ಥಾಪನೆ ಮಾಡಿಸಿದ್ದೆ. ಈ ಕಾಲೇಜುಗಳು ಸ್ಥಾಪನೆ ಆಗಲು ಹೆಚ್.ಡಿ.ರೇವಣ್ಣ ಕಾರಣ. ಈಗ ಬಿಜೆಪಿ ಶಾಸಕರು ಏನು ಮಾಡುತ್ತಿದ್ದಾರೆ ? ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 130-140 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲುವ ವಿಶ್ವಾಸವಿದೆ. 2006ರಲ್ಲಿ ನನ್ನ ತಂದೆ ಆಸೆಗೆ ವಿರುದ್ದವಾಗಿ ಹೋದೆ. ಅದರ ಪರಿಣಾಮ ಅವರ ಆರೋಗ್ಯಕ್ಕೆ ತೊಂದರೆ ಆಯಿತು. ಈ ಚುನಾವಣೆಯಲ್ಲಿ ಜೆಡಿಎಸ್ 130-140ಸ್ಥಾನಗಳಲ್ಲಿ ಗೆದ್ದು ಬರಲಿದೆ. ಇದನ್ನು ನಮ್ಮ ಜನ್ಮಭೂಮಿಯಿಂದ ಸವಾಲು ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.