ಬೆಂಗಳೂರು: ಶಾಸಕರಿಗೆ ಮಂಜೂರಾಗಿದ್ದ ನಿವೇಶನವನ್ನು ಭೂಗಳ್ಳರು ಕಬಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಸಕ ಗೂಳಿಹಟ್ಟಿ ಶೇಖರ್ ಗೆ ಮಂಜೂರಾಗಿದ್ದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರು ಕಬಳಿಸಿರುವ ಬಗ್ಗೆ ಶಾಸಕರು ಅಳಲು ತೋಡಿಕೊಂಡಿದ್ದಾರೆ.
ಶಾಸಕ ಗೂಳಿಹಟ್ಟಿ ಶೇಖರ್ ಗೆ ಮಂಜೂರಾಗಿದ್ದ ಬಿಡಿಎ ಜಿ ಕೆಟಗರಿ ಸೈಟ್ ನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಸಂಜಯನಗರದ ಆರ್ ಎಂ ವಿ 2ಸ್ಟೇಜ್ ನಲ್ಲಿ ನಿವೇಶನ ಸಂಖ್ಯೆ 3 ಬಿಡಿಎ 50X80 ಸೈಟ್ ಹಂಚಿಕೆಯಾಗಿತ್ತು. ಆದರೆ ಭೂಗಳ್ಳರು ನಕಲಿ ದಾಖಲೆಗಳ ಆಧಾರದ ಮೇಲೆ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಗಳೇ ಶಾಸಕರಿಗೆ ಗೊತ್ತಿಲ್ಲದಂತೆ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ರಾಮಮೂರ್ತಿ ಅಲಿಯಾಸ್ ಮಣಿವಣ್ಣನ್, ಅನುರಾಧಾ, ದೀಪಿಕಾ ಸೇರಿದಂತೆ 8 ಜನರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.