ಬೆಂಗಳೂರು : (ಜನವರಿ 3) ನಾಳೆಯಿಂದ ಬೆಂಗಳೂರಿಗರ ಮನೆ ಬಾಗಿಲಿಗೆ ಸರ್ಕಾರ ಬರಲಿದ್ದು, ಜನರ ಕುಂದು ಕೊರತೆಗಳನ್ನು ಸರ್ಕಾರ ಆಲಿಸಲಿದೆ.
ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಲುಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜ.3ರಿಂದ ಮೊದಲ ಹಂತದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಆರಂಭವಾಗಲಿದೆ. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸಲಿದೆ.
ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ 28 ವಿಧಾನಸಭಾ ವ್ಯಾಪ್ತಿಯಲ್ಲೂ ಕಾರ್ಯಕ್ರಮ ನಡೆಯಲಿದೆ. ಮೊದಲ ಹಂತದಲ್ಲಿ ಜ. 3ರಂದು ಮಹದೇವಪುರ ವಲಯ, ಜ. 5ರಂದು ಯಲಹಂಕ ಹಾಗೂ ಜ. 6ರಂದು ಪೂರ್ವ ವಲಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಆಲಿಸಿ, ಪರಿಹಾರ ನೀಡಲಿದ್ದಾರೆ.
ಜ.3ರಂದು ಕೆ.ಆರ್.ಪುರ ದೂರವಾಣಿ ನಗರದ ಐಟಿಐ ಕ್ರೀಡಾಂಗಣದಲ್ಲಿ ಮಹದೇವಪುರ ವಲಯದ ಕೆಆರ್ ಪುರ, ಮಹದೇವಪುರ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ.ಜ.5ರಂದು ಯಲಹಂಕ ನ್ಯೂಟೌನ್ನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಯಲಹಂಕ ವಲಯ ವ್ಯಾಪ್ತಿಯ ಯಲಹಂಕ, ಬ್ಯಾಟರಾ ಯನಪುರ, ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಆಲಿಸಲಾಗುತ್ತದೆ, ಜ.6ರಂದು ಶಿವನ್ಚೆಟ್ಟಿ ಗಾರ್ಡನ್ನ ಸೇಂಟ್ ಜಾನ್ಸ್ ರಸ್ತೆಯ ಆರ್ಬಿಎಎನ್ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಹೆಬ್ಬಾಳ, ಶಿವಾಜಿ ನಗರ, ಪುಲಕೇಶಿ ನಗರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಿಬಿಎಂಪಿ, ಜಲಮಂಡಳಿ, ಬಿಎಂಆರ್ಸಿಎಲ್ ಬಿಡಿಎ, ಬೆಸ್ಕಾಂ, , ಪೊಲೀಸ್ ಇಲಾಖೆ, ಬಿಎಂಟಿಸಿ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ. ಜನರಿಂದ ಬಂದಂತಹ ದೂರುಗಳನ್ನು ‘ಸಮಗ್ರ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.