alex Certify BIG NEWS: ಕೇಂದ್ರ ಸಚಿವರಾಗಿ ಬಿ.ವೈ. ರಾಘವೇಂದ್ರ…? ಸಿಎಂ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನ…? ವಿಜಯೇಂದ್ರಗೆ ಹೊಸ ಸ್ಥಾನ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಂದ್ರ ಸಚಿವರಾಗಿ ಬಿ.ವೈ. ರಾಘವೇಂದ್ರ…? ಸಿಎಂ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನ…? ವಿಜಯೇಂದ್ರಗೆ ಹೊಸ ಸ್ಥಾನ…?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಂಗಾರು ಅಧಿವೇಶನಕ್ಕೆ ಮೊದಲು ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡುವ ಕುರಿತು ಕೆಲವು ದಿನಗಳ ಹಿಂದೆ ಚರ್ಚೆ ನಡೆಸಿದ್ದಾರೆ.

ಕೇಂದ್ರ ಸಂಪುಟ ಪುನಾರಚನೆ ಕಸರತ್ತು ಶುರುವಾಗುತ್ತಿದ್ದಂತೆ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಸಂಸದರಲ್ಲಿಯೂ ಚಟುವಟಿಕೆ ಗರಿಗೆದರಿವೆ. ಆದರೆ, ಲಾಬಿ ಮಾಡಲು ಅವಕಾಶ ಇಲ್ಲ ಎನ್ನಲಾಗಿದೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದ ನಂತರದಲ್ಲಿ ಅನೇಕ ಬೆಳವಣಿಗೆ ನಡೆದಿವೆ. ಮುಂದಿನ ರಾಜಕೀಯ ಸಾಧ್ಯಾಸಾಧ್ಯತೆಗಳ ಕುರಿತು ಬಿಜೆಪಿ ಹೈಕಮಾಂಡ್ ಸಮಾಲೋಚನೆ ನಡೆಸಿದ್ದು, ಸಿಎಂ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಡಿ.ವಿ. ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಷಿ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುರೇಶ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಬದಲಾವಣೆ ದೃಷ್ಟಿಯಿಂದ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡಬಹುದಾದ ಸಾಧ್ಯತೆಯಿದೆ.

ರಾಘವೇಂದ್ರ ಕೇಂದ್ರ ಸಚಿವರಾದ ನಂತರ ಕೆಲವೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ನಿರ್ಮಿಸಬಹುದು ಎಂದು ಹೇಳಲಾಗುತ್ತಿದೆ. ಇನ್ನು ನಾಯಕತ್ವ ಬದಲಾವಣೆ ಆಗುವುದೇ ಆದಲ್ಲಿ ಕೇಂದ್ರದಲ್ಲಿ ರಾಘವೇಂದ್ರ ಸಚಿವರಾಗಲಿದ್ದು, ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಅವರಿಗೂ ಸರ್ಕಾರದಲ್ಲಿ ಸ್ಥಾನ ನೀಡಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸಂಪುಟಕ್ಕೆ ಯಾರೂ ಊಹೆ ಮಾಡದವರು ಕೂಡ ಸೇರ್ಪಡೆಯಾಗಿದ್ದಾರೆ. ಹೀಗಿರುವಾಗ ಲೆಕ್ಕಾಚಾರಗಳು ಏನೇ ನಡೆದರೂ ಹೀಗೆ ಆಗುತ್ತದೆ ಎಂದು ಹೇಳುವಂತಿಲ್ಲ. ಕರ್ನಾಟಕದಲ್ಲಿ ಮುಂದಿನ ಚುನಾವಣೆ, ನಾಯಕತ್ವ ಬದಲಾವಣೆ ಸೇರಿದಂತೆ ಹಲವು ರಾಜಕೀಯ ಲೆಕ್ಕಾಚಾರಗಳೊಂದಿಗೆ ಸಂಪುಟ ಪುನಾರಚನೆ ಮಾಡಬಹುದು. ಸಂಸದ ಶಿವಕುಮಾರ ಉದಾಸಿ ರಾಜ್ಯ ರಾಜಕೀಯಕ್ಕೆ ಮರಳಲಿರುವ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.

ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಚರ್ಚೆ ನಡೆಸಿರುವಂತೆ ಕೆಲವು ನಿಷ್ಕ್ರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಹೊಸ ತಂಡವನ್ನು ರಚಿಸುವ ನಿಟ್ಟಿನಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...