ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡನೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಜರುಗಿರುವ ಮತ್ತೊಂದು ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಸೋನಭದ್ರಾದಲ್ಲಿ ಉತ್ತರಪ್ರದೇಶ ರಾಜ್ಯದ ವಿದ್ಯುತ್ ಇಲಾಖೆಯ ತೇಜ್ಬಾಲಿ ಸಿಂಗ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ದಲಿತ ಯುವಕನನ್ನು ತನ್ನ ಕಾಲುಗಳನ್ನು ನೆಕ್ಕಲು ಮತ್ತು ಬಸ್ಕಿ ಹೊಡೆಯುವಂತೆ ಒತ್ತಾಯಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ ಜುಲೈ 6 ರಂದು ಈ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ ದಲಿತ ಯುವಕನನ್ನು ಪಾದಗಳನ್ನು ನೆಕ್ಕುವಂತೆ ಮತ್ತು ಶಿಕ್ಷೆಯ ರೂಪದಲ್ಲಿ ಬಸ್ಕಿ ಹೊಡೆಯುವಂತೆ ಒತ್ತಾಯಿಸಲಾಗಿದೆ. ಮತ್ತು ಯುವಕನಿಗೆ ದುಡ್ಡು ನೀಡುವಂತೆಯೂ ಸಹ ಒತ್ತಾಯಿಸಿರುವುದು ವಿಡಿಯೋದಲ್ಲಿ ಗೊತ್ತಾಗಿದೆ.
ಸುದ್ದಿ ವರದಿಗಳ ಪ್ರಕಾರ ರಾಜ್ಯ ವಿದ್ಯುತ್ ಇಲಾಖೆಯು ಬಿಲ್ ಪಾವತಿಸದ ಹಲವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಈ ವೇಳೆ ಯುವಕನನ್ನು ಸಿಬ್ಬಂದಿ ಅವಮಾನಿಸಿದ್ದು ಇತರರು ಯುವಕನ ಪರವಾಗಿ ಹಣ ಪಾವತಿಸಿದ ನಂತರ ಆತನನ್ನು ಬಿಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.