ಶಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಉತ್ಪಾದಿಸುವ ಆರ್ಡಿನೆನ್ಸ್ ಕಾರ್ಖಾನೆಗಳ ಮಂಡಳಿಯನ್ನು ವಿಸರ್ಜಿಸಿ, ದೇಶಾದ್ಯಂತ ಇರುವ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಕಾರ್ಪೋರೇಷನ್ಗಳನ್ನಾಗಿ ಮಾರ್ಪಾಡು ಮಾಡುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ಈ ಕಾರ್ಖಾನೆಗಳ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಸಂಬಂಧ ಕೇಂದ್ರ ತರಲು ಉದ್ದೇಶಿಸಿರುವ ಅತ್ಯಗತ್ಯ ರಕ್ಷಣಾ ಸೇವೆಗಳ ಮಸೂದೆ, 2021ನ್ನು ವಿರೋಧಿಸಿ ಓಎಫ್ಬಿ ನೌಕರರು ಜುಲೈ 26ರಂದು ಪ್ರತಿಭಟನೆ ನಡೆಸಲಿದ್ದಾರೆ. ಇದೇ ವಾರದಲ್ಲಿ ಮೇಲ್ಕಂಡ ಮಸೂದೆಗೆ ಅಂಕಿತ ನೀಡುವ ಸಂಬಂಧ ರಾಜ್ಯಸಭೆಯ ಚಟುವಟಿಕೆ ಸಲಹಾ ಸಮಿತಿ ಸಭೆ ನಡೆಸಿದೆ.
“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಡೆಯನ್ನು ಆರ್ಡಿನೆನ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ 80,000 ನೌಕರರು ಹಾಗೂ ನಾಲ್ಕು ಲಕ್ಷದಷ್ಟು ರಕ್ಷಣಾ ನಾಗರಿಕ ನೌಕರರು ವಿರೋಧಿಸುತ್ತಾರೆ” ಎಂದು ಅಖಿಲ ಭಾರತ ರಕ್ಷಣಾ ಉದ್ಯೋಗಿಗಳ ಸಂಘದ ಮಹಾ ಕಾರ್ಯದರ್ಶಿ ಸಿ ಶ್ರೀಕುಮಾರ್ ತಿಳಿಸಿದ್ದಾರೆ.
ಆರ್ಡಿನೆನ್ಸ್ ಕಾರ್ಖಾನೆಗಳನ್ನು ಸರ್ಕಾರಿ ಸ್ವಾಮ್ಯದಲ್ಲಿರುವ ಏಳು ಕಾರ್ಪೋರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸಿ, 2013ರ ಕಂಪನಿ ಕಾಯಿದೆ ಅಡಿ ನೋಂದಣಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ಇಟ್ಟಿರುವ ಹೆಜ್ಜೆಗಳನ್ನು ಪ್ರತಿಭಟನೆಗೆ ಮುಂದಾಗುತ್ತಿರುವ ನೌಕರರು ಪ್ರಶ್ನಿಸಿದ್ದಾರೆ.
ಯಾವುದೇ ಸಂದರ್ಭದಲ್ಲೂ ದೇಶದ ರಕ್ಷಣಾ ಪಡೆಗಳ ಯುದ್ಧ ಸಿದ್ಧತೆಗೆ ಭಂಗವಾಗದ ಮಟ್ಟದಲ್ಲಿ ಶಸ್ತ್ರಸ್ತ್ರಗಳ ಪೂರೈಕೆಯನ್ನು ನಿರಂತರವಾಗಿ ಖಾತ್ರಿಪಡಿಸುವ ಉದ್ದೇಶದಿಂದ ಈ ಮಸೂದೆಯನ್ನು ಪರಿಚಯಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.