ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶನಿವಾರದಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಇದರ ಮಧ್ಯೆ ಪ್ರಮಾಣವಚನ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವ ಬರಹ ಬರೆದ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಅಮಾನತುಗೊಂಡವರಾಗಿದ್ದು, ಇವರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹೊಸ ಸರ್ಕಾರದ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶಾಂತಮೂರ್ತಿ ಫೇಸ್ಬುಕ್ ನಲ್ಲಿ ಎಸ್ಎಂ ಕೃಷ್ಣ ಅವಧಿಯಲ್ಲಿ 3,590 ಕೋಟಿ ರೂಪಾಯಿ, ಧರ್ಮಸಿಂಗ್ 15,635 ಕೋಟಿ ರೂಪಾಯಿ, ಎಚ್ ಡಿ ಕುಮಾರಸ್ವಾಮಿ 3,545 ಕೋಟಿ ರೂಪಾಯಿ, ಬಿಎಸ್ ಯಡಿಯೂರಪ್ಪ 25,653 ಕೋಟಿ ರೂಪಾಯಿ, ಸದಾನಂದ ಗೌಡ 9,464 ಕೋಟಿ ರೂಪಾಯಿ, ಜಗದೀಶ್ ಶೆಟ್ಟರ್ 13,464 ಕೋಟಿ ರೂಪಾಯಿ, ಸಿದ್ದರಾಮಯ್ಯ 2,42,000 ಕೋಟಿ ರೂಪಾಯಿ ಸಾಲ ಮಾಡಿದರು. ಅವರೆಲ್ಲರ ಅವಧಿಯಲ್ಲಿ ಒಟ್ಟು 71,331 ಕೋಟಿ ರೂಪಾಯಿ ಸಾಲವಾಗಿದ್ದರೆ ಸಿದ್ದರಾಮಯ್ಯ 2,42,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಪೋಸ್ಟ್ ಹಾಕಿದ್ದರು. ಅಲ್ಲದೆ ಇದನ್ನು ವಾಟ್ಸಾಪ್ ಗ್ರೂಪ್ ಗಳಿಗೂ ಶೇರ್ ಮಾಡಿದ್ದು ಇದೀಗ ಶಾಂತಮೂರ್ತಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.