ಡ್ರೈ ಫ್ರುಟ್ ಸೇವನೆಯಿಂದ ಅದರಲ್ಲೂ ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂಬುದೇನೋ ನಿಜ. ಆದರೆ ಇದರ ವಿಪರೀತ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡೀತು.
ಖರ್ಜೂರ, ಬಾದಾಮಿಗಳನ್ನು ದಿನಕ್ಕೆ ಎರಡರಿಂದ ಮೂರರಷ್ಟು ಸೇವಿಸಿದರೆ ಸಾಕು. ಅದಕ್ಕಿಂತ ಹೆಚ್ಚು ತಿಂದರೆ ಉಷ್ಣದ ಲಕ್ಷಣಗಳು ಕಂಡುಬಂದಾವು. ತ್ವಚೆಯಲ್ಲಿ ಬಿರುಕು, ಹಿಮ್ಮಡಿ ಒಡೆಯುವುದು ಇಲ್ಲವೇ ಬಾಯಿ ಹುಣ್ಣಿನಂಥ ಸಮಸ್ಯೆಗಳು ಕಂಡು ಬಂದಾವು.
ಒಣಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯದೆ ಸಮಸ್ಯೆ ಕಂಡು ಬಂದೀತು. ಗ್ಯಾಸ್ಟ್ರಿಕ್ ಉಲ್ಬಣಗೊಳ್ಳಲು ಕಾರಣವಾದೀತು. ಬಾದಾಮಿ ತಿನ್ನುವಾಗ ನೀರಿನಲ್ಲಿ ರಾತ್ರಿ ವೇಳೆ ನೆನೆಸಿಟ್ಟು ಬೆಳಗ್ಗೆ ಸೇವಿಸುವುದು ಅತ್ಯುತ್ತಮ ವಿಧಾನ.
ಉಪ್ಪು ಬೆರೆಸಿರುವ ಒಣಹಣ್ಣುಗಳನ್ನು ಕಡಿಮೆ ಸೇವಿಸಿ. ಏಕೆಂದರೆ ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿ ರಕ್ತದೊತ್ತಡ ಅಥವಾ ಮಲಬದ್ಧತೆಗೆ ಕಾರಣವಾದೀತು. ಹಸಿವಾಗದಂತೆ ತಡೆಯುವ ಒಣದ್ರಾಕ್ಷಿಯನ್ನು ದಿನಕ್ಕೆ ಒಂದು ಮುಷ್ಠಿಯಷ್ಟು ಸೇವಿಸಿದರೂ ಸಮಸ್ಯೆಯಿಲ್ಲ.