alex Certify ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾದವರ ಜೀವನದಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವಂತಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾದವರ ಜೀವನದಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವಂತಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ಪ್ರಾಪ್ತ ವಯಸ್ಕರಾಗಿರುವ ಯುವಕ – ಯುವತಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿ ಒಟ್ಟಿಗೆ ಜೀವನ ನಡೆಸುತ್ತಿದ್ದರೆ ಅಂತವರ ಜೀವನದಲ್ಲಿ ಕುಟುಂಬ ಸದಸ್ಯರೂ ಸೇರಿದಂತೆ ಮೂರನೇ ವ್ಯಕ್ತಿಗಳು ಮಧ್ಯ ಪ್ರವೇಶಿಸುವಂತಿಲ್ಲ. ಒಂದೊಮ್ಮೆ ಈ ರೀತಿ ಮದುವೆಯಾದ ಜೋಡಿ ತಮಗೆ ರಕ್ಷಣೆ ಕೋರಿದರೆ ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರ ಇದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಜಾತಿ – ಧರ್ಮ ಮೀರಿ ಮದುವೆಯಾದವರ ರಕ್ಷಣೆ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳೇ ಹೊರಬೇಕು. ಈ ಮೂಲಕ ಸಂವಿಧಾನ ನೀಡಿರುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

ಅಂತರ್ಜಾತಿ ವಿವಾಹವಾಗಿದ್ದ ದಂಪತಿಗಳ ಪ್ರಕರಣದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಪೊಲೀಸ್ ಸೇರಿದಂತೆ ಸರ್ಕಾರದ ಅಂಗ ಸಂಸ್ಥೆಗಳು ಕೂಡಾ ಮದುವೆಯಾದವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಯಾವುದೇ ವಯಸ್ಕ ಯುವಕ – ಯುವತಿ, ಜಾತಿ – ಧರ್ಮಗಳನ್ನು ಮೀರಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾದ ಸಂದರ್ಭದಲ್ಲಿ ಕುಟುಂಬ ಸದಸ್ಯರೂ ಸಹ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದು, ನಮ್ಮ ಸಂವಿಧಾನ ಕೂಡ ಇದನ್ನೇ ಹೇಳಿದೆ ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ.

ಉತ್ತರ ಪ್ರದೇಶದ ಯುವತಿ ವಿಶೇಷ ವಿವಾಹ ಕಾನೂನಿನಡಿ ಜೂನ್ 13ರಂದು ಅಂತರ್ಜಾತಿ ಮದುವೆಯಾಗಿದ್ದು, ಆಕೆಯ ಪೋಷಕರು ರಾಜಕೀಯವಾಗಿ ಬಲಿಷ್ಠರಾಗಿದ್ದ ಕಾರಣ ದಂಪತಿ ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಮಹತ್ವದ ಆದೇಶ ಹೊರ ಬಿದ್ದಿದೆ.

ತನಗೆ ಹಾಗೂ ಪತಿಗೆ ರಕ್ಷಣೆ ನೀಡಬೇಕೆಂದು ಯುವತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ತನ್ನ ತಂದೆ ಈ ಮದುವೆ ವಿರೋಧಿಸುತ್ತಿದ್ದು, ಕುಟುಂಬಸ್ಥರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ಕೂಡಾ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ್ದರು.

ಇದೀಗ ನವ ಜೋಡಿಗೆ ರಕ್ಷಣೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದು, ಪೊಲೀಸರು ಪ್ರತಿ ಎರಡು ದಿನಕ್ಕೊಮ್ಮೆ ಅವರ ಮನೆಗೆ ಭೇಟಿ ನೀಡಿ ರಕ್ಷಣೆಯ ನಿಗಾ ವಹಿಸಬೇಕು ಈ ರೀತಿ ಮೂರು ವಾರದವರೆಗೂ ಮುಂದುವರೆಸಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...