ರಾಜ್ಯ ವಿಧಾನಸಭೆಯ ಚುನಾವಣಾ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಆಡಳಿತರೂಢ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಇನ್ನು ಅತಂತ್ರ ಸ್ಥಿತಿಯನ್ನು ನಿರೀಕ್ಷೆ ಮಾಡಿದ್ದ ಜೆಡಿಎಸ್ ಕೂಡ ನೆಲ ಕಚ್ಚಿದೆ.
ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಕಿಕ್ಕಿರಿದಿರುತ್ತಿದ್ದ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಶನಿವಾರ ಭಣಗುಟ್ಟಿದೆ. ದೃಶ್ಯ ಮಾಧ್ಯಮದಲ್ಲಿ ಚುನಾವಣಾ ಫಲಿತಾಂಶವನ್ನು ವೀಕ್ಷಿಸುತ್ತಿದ್ದವರು ಯಾವಾಗ ಬಿಜೆಪಿಗೆ ಹಿನ್ನಡೆ ಆರಂಭವಾಯಿತೋ ಪಕ್ಷದ ಕಚೇರಿಯತ್ತ ಸುಳಿಯಲೂ ಇಲ್ಲ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದವರೂ ಸಹ ಉತ್ಸಾಹ ಕಳೆದುಕೊಂಡಿದ್ದು, ಪಕ್ಷದ ಸೋಲಿನ ಕಾರಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್ ಟಿ ನಗರ ಹಾಗೂ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸವೂ ಸಹ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಲ್ಲದೆ ಬಿಕೋ ಎನ್ನುತ್ತಿದೆ.