ರಾಷ್ಟ್ರಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಇದನ್ನು ಬಾಲ್ಯದಿಂದಲೇ ಕಲಿಸಲಾಗುತ್ತದೆ. ತ್ರಿವರ್ಣ ಧ್ವಜಕ್ಕೆ ಯಾವುದೇ ಅಗೌರವ ಅಥವಾ ತಿರಸ್ಕಾರ ತೋರಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು.
ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದಲ್ಲಿ 52 ವರ್ಷದ ವ್ಯಕ್ತಿಯೊಬ್ಬ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿದ್ದಾನೆ. ತನ್ನ ದ್ವಿಚಕ್ರ ವಾಹನವನ್ನು ಸ್ವಚ್ಛಗೊಳಿಸಲು ಈತ ರಾಷ್ಟ್ರಧ್ವಜವನ್ನು ಬಳಸಿದ್ದಾನೆ. ಈ ವ್ಯಕ್ತಿ ಉತ್ತರ ಘೋಂಡಾ ಪ್ರದೇಶದ ನಿವಾಸಿ.
ವ್ಯಕ್ತಿ ಮಡಿಸಿಟ್ಟಿದ್ದ ಧ್ವಜದಿಂದ ತನ್ನ ಬಿಳಿ ಸ್ಕೂಟರ್ ಅನ್ನು ಸ್ವಚ್ಛಗೊಳಿಸುವ ಮತ್ತು ಧೂಳು ಹೊಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೃಶ್ಯವನ್ನು ಚಿತ್ರೀಕರಿಸಿದ ಸ್ಥಳೀಯರು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ನಂತರ ಈ ವಿಚಾರ ಬೆಳಕಿಗೆ ಬಂದಿದ್ದು, ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊ ವೈರಲ್ ಆದ ನಂತರ ದೆಹಲಿ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವ್ಯಕ್ತಿ ಬಳಸಿದ ಧ್ವಜ ಮತ್ತು ಆತನ ಸ್ಕೂಟಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಉದ್ದೇಶಪೂರ್ವಕವಾಗಿ ಅಲ್ಲ, ಆಕಸ್ಮಿಕವಾಗಿ ಪ್ರಮಾದ ಎಸಗಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ. ತನಿಖೆಗೆ ಸಹಕರಿಸುವಂತೆ ಈಗಾಗ್ಲೇ ಆರೋಪಿಗೆ ಸೂಚಿಸಲಾಗಿದೆ. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಆತನಿಗೆ ಸೂಚನೆ ನೀಡಲಾಗಿದೆ.