ಬಾಗಲಕೋಟೆ: ರಾಜ್ಯದಲ್ಲಿ ವರುಣಾರ್ಭಟಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಸೇತುವೆಗಳೇ ಮುಳುಗಡೆಯಾಗಿವೆ. ಇಂತಹ ಸೇತುವೆ ಮೇಲೆ ಹೋಗದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ, ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಯುವಕರು ಸೇತುವೆಗಳ ಮೇಲೆ ನಿಂತು ಹುಚ್ಚಾಟವಾಡುತ್ತಿದ್ದಾರೆ.
ಜಲಾವೃತಗೊಂಡಿರುವ ಸೇತುವೆ ಮೇಲೆ ನಿಂತು ಸೆಲ್ಫೀ, ವಿಡಿಯೋಗಳಿಗೆ ಯುವಕರು ಪೋಸ್ ನೀಡುತ್ತಾ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದು ಸಂಭ್ರಮಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಾಗಲಕೋಟೆ ಜಿಲ್ಲೆಯ ಶ್ರಮಬಿಂದು ಸಾಗರದ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದರೂ ಸೇತುವೆ ಮಧ್ಯ ಭಾಗಕ್ಕೆ ತೆರಳಿರುವ ಯುವಕರ ಗುಂಪು ವಿಡಿಯೋಗಾಗಿ ಹುಚ್ಚಾಟ ಮೆರೆದಿದೆ.
ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ ಸೇತುವೆ ಮೇಲೆ ಬೋರ್ಗರೆದು ನೀರು ಹರಿಯುತ್ತಿದ್ದು, ಇಂತಹ ಅಪಾಯದ ನಡಿವೆಯೇ ಯುವಕರು ಸೇತುವೆ ಮಧ್ಯಭಾಗದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನೀರಿನ ರಭಸಕ್ಕೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ.