ಕೊಚ್ಚಿ: ವೈದ್ಯರು ಮತ್ತು ನರ್ಸ್ಗಳು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ ಎಂಬುದನ್ನು ಕೇರಳದ ಕೊಚ್ಚಿಯ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. ತಮ್ಮ ಸಮಯೋಚಿತ ಕಾರ್ಯದಿಂದ ಸಹ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ.
ಹೌದು, ಚಲಿಸುತ್ತಿರುವ ಬಸ್ನಲ್ಲಿ ವ್ಯಕ್ತಿಯೊಬ್ಬ ಮೂರ್ಛೆ ಹೋಗಿದ್ದಾನೆ. ಕೂಡಲೇ ಆ ವ್ಯಕ್ತಿಗೆ ನರ್ಸ್ ಸಕಾಲಿಕ ಸಿಪಿಆರ್ ನಿರ್ವಹಿಸಿ, ಆತನ ಜೀವ ಕಾಪಾಡಿದ್ದಾರೆ. 34 ವರ್ಷದ ನರ್ಸ್ ಶೀಬಾ ಅನೀಶ್ ಎಂಬುವವರು ತಮ್ಮ ಕರ್ತವ್ಯ ಮುಗಿಸಿ ರಾತ್ರಿ 9:10 ಕ್ಕೆ ಬಸ್ ಹತ್ತಿ ಮನೆಗೆ ತೆರಳುತ್ತಿದ್ದರು.
ಬಸ್ ಹತ್ತಿದ ಕೆಲವೇ ನಿಮಿಷಗಳಲ್ಲಿ, ಶೀಬಾಗೆ ತನ್ನ ಭುಜವನ್ನು ಯಾರೋ ಮುಟ್ಟುತ್ತಿರುವಂತೆ ಅನಿಸಿತು. ಆದರೆ, ಆಕೆಗೆ ಏನೆಂದು ಅರ್ಥವಾಗುವ ಮೊದಲೇ ತನ್ನ ಹಿಂದೆ ಕುಳಿತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಯುವಕ ವಿಷ್ಣು ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದರಿಂದ ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಆತನ ಬಾಯಿಯಿಂದ ನೊರೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ರಕ್ತ ಬರಲಾರಂಭಿಸಿದೆ.
ವಿಷ್ಣು ನರಳುತ್ತಿರುವುದನ್ನು ನೋಡಿದ ಶೀಬಾ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಯುವಕನ ನಾಡಿಮಿಡಿತ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಅವರು, ಬಸ್ ಚಾಲಕನ ಬಳಿ ಹತ್ತಿರದ ಆಸ್ಪತ್ರೆಯಲ್ಲಿ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಆದರೆ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಬಸ್ ಚಾಲಕ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಈ ಮಧ್ಯೆ ವಿಷ್ಣುವಿನ ನಾಡಿಮಿಡಿತ ಕಡಿಮೆಯಾಗುತ್ತಾ ಬಂದಿದೆ. ಇದರಿಂದ ಶೀಬಾ, ವಿಷ್ಣುವಿಗೆ ಸಿಪಿಆರ್ ಮಾಡಿದ್ದಾರೆ. ಎರಡು ಬಾರಿ ಸಿಪಿಆರ್ ಮಾಡಿದ ನಂತರ ಆತ ಸಹಜ ಸ್ಥಿತಿಗೆ ಮರಳಿದ್ದಾನೆ. ಸ್ವಲ್ಪ ವಿಳಂಬವಾಗಿದ್ದರೂ ಆತನಿಗೆ ಜೀವಕ್ಕೆ ಅಪಾಯವಿತ್ತು. ನಂತರ ವಿಷ್ಣುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಗಮಾಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶೀಬಾಳ ಸ್ಪೂರ್ತಿದಾಯಕ ಕೆಲಸವನ್ನು ಗುರುತಿಸಿದ ಅಪೋಲೋ ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ಎಂದು ಶ್ಲಾಘಿಸಿದ್ದಾರೆ. ಅವರ ಸಮಯೋಚಿತ ಕಾರ್ಯದಿಂದ ವ್ಯಕ್ತಿಯ ಜೀವ ಉಳಿದಿದೆ.