ಮಾನವ ತನ್ನ ದುರಾಸೆಗಾಗಿ ಕಾಡನ್ನು ನಾಶ ಮಾಡಿಕೊಂಡು ಬಂದಿದ್ದು, ಇದರ ಪರಿಣಾಮ ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿಂದ ವರ್ತಿಸಬೇಕಾದ ಮಾನವ ಆಗಲೂ ಸಹ ತನ್ನ ಕ್ರೌರ್ಯ ಮೆರೆಯುತ್ತಿದ್ದು ಇಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಅಸ್ಸಾಂನ ಹೊಜೈ ಜಿಲ್ಲೆಯ ಲೆಂಕಾ ನಗರದ ಶಲ್ಬಾಗನ್ ಏರಿಯಾದಲ್ಲಿ ಅಕ್ಟೋಬರ್ 12ರಂದು ನಡೆದಿದೆ ಎನ್ನಲಾಗಿದ್ದು, @TheViditsharma ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಶರ್ಮಾ ಅವರಿಗೂ ಟ್ಯಾಗ್ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ವಿಡಿಯೋದಲ್ಲಿ ಕಾಣುವಂತೆ ಗುಂಪಿನಿಂದ ತಪ್ಪಿಸಿಕೊಂಡ ಮರಿಯಾನೆಯೊಂದು ಗ್ರಾಮಕ್ಕೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಅದನ್ನು ಸುತ್ತುವರಿದ ಗುಂಪು ಇನ್ನಿಲ್ಲದಂತೆ ಕಿರುಕುಳ ನೀಡಿದೆ. ಕೆಲವರು ಅದರ ಬಾಲ ಎಳೆದರೆ ಮತ್ತಷ್ಟು ಮಂದಿ ಕಲ್ಲನ್ನು ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರಿಂದ ಒತ್ತಾಯ ಕೇಳಿಬಂದಿದೆ.