alex Certify ಕೊನೆಗೂ ಬಯಲಾಯ್ತು ಸಾವಿನ ರಹಸ್ಯ! 2 ವಾರ ಮೊದಲೇ ಶುರುವಾಗುತ್ತದೆ ಸಾವಿನ ಪ್ರಕ್ರಿಯೆ, ನಿಮಗೂ ಸಿಕ್ಕಿರಬಹುದು ಇಂಥಾ ಸಂಕೇತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಬಯಲಾಯ್ತು ಸಾವಿನ ರಹಸ್ಯ! 2 ವಾರ ಮೊದಲೇ ಶುರುವಾಗುತ್ತದೆ ಸಾವಿನ ಪ್ರಕ್ರಿಯೆ, ನಿಮಗೂ ಸಿಕ್ಕಿರಬಹುದು ಇಂಥಾ ಸಂಕೇತ…!

ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಯಲೇಬೇಕು. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಸಾವಿಗೂ ಮೊದಲು ಸೂಚನೆ ಸಿಗುತ್ತದೆಯೇ? ತಾನು ಸಾಯುತ್ತೇನೆ ಎಂಬುದು ಅವರ ಅರಿವಿಗೆ ಬಂದಿರುತ್ತದೆಯೇ? ಸಾವಿನ ಸಂಕೇತ ಹೇಗಿರುತ್ತದೆ? ಈ ಎಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇವುಗಳಲ್ಲಿ ಕೆಲವೊಂದಷ್ಟು ಪ್ರಶ್ನೆಗಳಿಗೆ ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಉತ್ತರ ಕಂಡುಕೊಂಡಿದ್ದಾರೆ.

ಅದರ ಪ್ರಕಾರ ಸಾವು ಬರುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತದೆ. ಆಕಸ್ಮಿಕ ಸಾವಿನ ಪ್ರಕರಣಗಳಲ್ಲಿ ಇದನ್ನು ಅರಿತುಕೊಳ್ಳಲಾಗುವುದಿಲ್ಲ. ಆದರೆ ಸಾಮಾನ್ಯವಾಗಿ ಸಾವಿನ ಸಿದ್ಧತೆ ಎರಡು ವಾರಗಳ ಮುಂಚಿತವಾಗಿಯೇ ಆರಂಭವಾಗಿರುತ್ತದೆ ಅನ್ನೋದು ವಿಜ್ಞಾನಿಗಳ ವಾದ. ಒಬ್ಬ ವ್ಯಕ್ತಿ ಸಾವಿಗೂ ಮುನ್ನ ಯಾವ ರೀತಿ ಇರುತ್ತಾನೆ? ಅವನಲ್ಲೇನು ಭಾವನೆಗಳಿರುತ್ತವೆ ಎಂಬುದನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಒಬ್ಬ ವ್ಯಕ್ತಿಯು ಸತ್ತಾಗ, ಅವನ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಅವನ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ ಅನ್ನೋ ವಿವರಗಳನ್ನು ನೀಡಿದ್ದಾರೆ. ಸಾವಿಗೂ ಮುನ್ನ ರೋಗಿಗಳ ಅನುಭವಗಳನ್ನು ಪಡೆಯಲಾಗಿದೆ. ಹೃದಯ ಬಡಿತ ನಿಲ್ಲುವ ಎರಡು ವಾರಗಳ ಮೊದಲು ಸಾವಿನ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಎರಡು ವಾರಗಳ ಮೊದಲೇ ಜಗತ್ತಿಗೆ ವಿದಾಯ ಹೇಳುವ ದಿನ ಬರುತ್ತದೆ ಎಂಬುದು ಅವರ ಅರಿವಿಗೆ ಬರಲಾರಂಭಿಸುತ್ತದೆ ಅನ್ನೋದು ವೈದ್ಯರ ಅಭಿಪ್ರಾಯ.

ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ಸಂಶೋಧಕ ಸೀಮಸ್ ಕೊಯ್ಲ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸಾಯುವ ಪ್ರಕ್ರಿಯೆ ಎರಡು ವಾರಗಳ ಮೊದಲು ಪ್ರಾರಂಭವಾಗುತ್ತದೆ, ಆ ಸಮಯದಲ್ಲಿ ಆರೋಗ್ಯ ಹದಗೆಡಲು ಶುರುವಾಗುತ್ತದೆ. ಸಾಮಾನ್ಯವಾಗಿ ನಡೆಯಲು ಮತ್ತು ಮಲಗಲು ತೊಂದರೆಯಾಗಬಹುದು. ಮಲಗಿದ ವ್ಯಕ್ತಿ ಆಗಾಗ ಆಘಾತದಿಂದ ಎಚ್ಚರಗೊಳ್ಳುತ್ತಾನೆ. ಮಾತ್ರೆಗಳನ್ನು ನುಂಗಲು, ಆಹಾರ ಸೇವಿಸಲು ಕಷ್ಟವಾಗುತ್ತಿದ್ರೆ ಅವರು ಜಗತ್ತಿನ ಪಯಣ ಮುಗಿಸಿ ಹೊರಡುವ ಸಮಯ ಬಂದಿದೆ ಎಂದರ್ಥವಂತೆ.

ಅವರು ಬದುಕುವುದು ಇನ್ನು ಕೇವಲ ಎರಡು ಮೂರು ದಿನಗಳು ಮಾತ್ರ ಎಂದಿದ್ದಾಗ ಮಾತ್ರ ಈ ರೀತಿ ಸಮಸ್ಯೆಗಳಾಗುತ್ತವೆ ಎನ್ನುತ್ತಾರೆ ಸೀಮಸ್.‌ ಅನೇಕ ಜನರು ಈ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ದಿನದೊಳಗೆ ಮುಗಿಸಿ ಹೋಗಬಹುದು. ಕೆಲವರು ವಾಸ್ತವವಾಗಿ ಸಾಯುವ ಮೊದಲು ಸುಮಾರು ಒಂದು ವಾರದವರೆಗೆ ಈಗಲೋ ಆಗಲೋ ಎಂಬಂತಿರುತ್ತಾರೆ. ಸಾವಿಗೂ ಮುನ್ನ ಎಲ್ಲರ ಮನಸ್ಸಿನಲ್ಲೂ ಒಂದೇ ತೆರನಾದ ಭಾವನೆಗಳಿರುವುದಿಲ್ಲ. ಹಾಗಾಗಿ ಅದನ್ನು ಊಹಿಸುವುದು ಕಷ್ಟ.

ಸಾವಿನ ಸಮಯದಲ್ಲಿ ದೇಹಕ್ಕೆ ನಿಖರವಾಗಿ ಏನಾಗುತ್ತದೆ ಎಂಬುದು ಕೂಡ ಬಹುಮಟ್ಟಿಗೆ ಬಗೆಹರಿಯದ ಪ್ರಶ್ನೆಯಾಗಿದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಸಾಯುವ ಮೊದಲು ಮೆದುಳಿನಿಂದ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಎಂಡಾರ್ಫಿನ್ಗಳು ಸೇರಿವೆ. ಇದು ವ್ಯಕ್ತಿಯಲ್ಲಿ ಯೂಫೋರಿಯಾದ ಭಾವನೆಗಳನ್ನು ಹೆಚ್ಚಿಸುತ್ತದೆ. ಸಾವಿನ ನಿಜವಾದ ಕ್ಷಣವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಸೀಮಸ್ ಹೇಳಿದ್ದಾರೆ.

ಸಾವು ಸಮೀಪಿಸಿದಾಗ ಒತ್ತಡವು ದೇಹದೊಳಗಿನ ರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಅಥವಾ ಇತರ ಸಮಸ್ಯೆ ಇರುವವರಲ್ಲಿ ಉರಿಯೂತ ಹೆಚ್ಚಾಗಬಹುದು. ದೇಹವು ಸೋಂಕಿನ ವಿರುದ್ಧ ಹೋರಾಡುವಾಗ ಈ ರಾಸಾಯನಿಕಗಳು ದೇಹದೊಳಗೆ ಹೆಚ್ಚಾಗುತ್ತವೆ. ಸಾಮಾನ್ಯವಾಗಿ, ಸಾಯುವ ಪ್ರಕ್ರಿಯೆಯಲ್ಲಿ ಜನರ ನೋವು ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಆದ್ರೆ ಇದರ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...