ಹೃದಯಾಘಾತದಿಂದಾಗಿ ಐಸಿಯುನಲ್ಲಿದ್ದ ನಟ ಹಾಗೂ ಕಾಮಿಡಿಯನ್ ರಾಜು ಶ್ರೀವಾಸ್ತವ ಅವರಿಗೆ 15 ದಿನಗಳ ಬಳಿಕ ಪ್ರಜ್ಞೆ ಬಂದಿದೆ. ಆಗಸ್ಟ್ 10ರಿಂದ್ಲೂ ರಾಜು ಶ್ರೀವಾಸ್ತವ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜು ಶ್ರೀವಾಸ್ತವ ಅವರ ಆರೋಗ್ಯ ಸುಧಾರಿಸುತ್ತಿದೆ ಅಂತಾ ಪಿಎ ಗರ್ವಿತ್ ನಾರಂಗ್ ಮಾಹಿತಿ ನೀಡಿದ್ದಾರೆ.
ರಾಜು ಶ್ರೀವಾಸ್ತವ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರವೇ ವೆಂಟಿಲೇಟರ್ ತೆಗೆಯಲಾಗುವುದು ಎಂದು ಕಾಮಿಡಿಯನ್ ಸುನಿಲ್ ಪಾಲ್ ಹೇಳಿದ್ದರು. ಆಗಸ್ಟ್ 10ರಂದು ಜಿಮ್ನಲ್ಲಿ ವರ್ಕೌಟ್ ಮಾಡುವ ವೇಳೆ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿತ್ತು. ತೀವ್ರ ಎದೆನೋವಿನಿಂದ ಆತ ಕುಸಿದು ಬಿದ್ದಿದ್ದರು.
ಕೆಲವು ನಾಯಕರ ಭೇಟಿಗಾಗಿ ರಾಜು ಶ್ರೀವಾಸ್ತವ ದೆಹಲಿಗೆ ಬಂದಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ. ಜಿಮ್ನಲ್ಲಿ ಅವರ ಟ್ರೈನರ್ ಖುದ್ದಾಗಿ, ರಾಜು ಶ್ರೀವಾಸ್ತವ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗಸ್ಟ್ 10ರಂದೇ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆದ್ರೆ ರಾಜು ಶ್ರೀವಾಸ್ತವ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದರು.
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ರಾಜು ಶ್ರೀವಾಸ್ತವ ಮೃತಪಟ್ಟಿದ್ದಾರೆಂಬ ವದಂತಿಯೂ ಹರಡಿತ್ತು. ಆದ್ರೆ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳ ಪ್ರಾರ್ಥನೆಯ ಫಲವಾಗಿ ರಾಜು ಶ್ರೀವಾಸ್ತವ ಗುಣಮುಖರಾಗಿದ್ದಾರೆ. 15 ದಿನಗಳ ನಂತರ ಅವರಿಗೆ ಪ್ರಜ್ಞೆ ಮರಳಿದೆ.