alex Certify ʼವಿಜಯಪುರʼದ ಸಿರಿ ಈ ಶಿವಗಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಜಯಪುರʼದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನ ಆರಾಧನೆ ಆರಂಭವಾದದ್ದು ಸಹಸ್ರಾರು ವರ್ಷಗಳ ಹಿಂದೆ.

ಸಿಂಧೂ ನಾಗರಿಕತೆಯ ಕಾಲದಲ್ಲಿ ಪಶುಪತಿ ಹೆಸರಿನಲ್ಲಿ ಪೂಜಿಸಲ್ಪಡುತ್ತಿದ್ದ ಶಿವನನ್ನು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಭಕ್ತರು ಆರಾಧಿಸುತ್ತಾರೆ.’ ಸತ್ಯಂ ಶಿವಂ ಸುಂದರಂ’ ಎಂಬ ಮಾತು ಶಿವನ ಮಹತ್ವವನ್ನು ಬಣ್ಣಿಸುವುದು. ಹಿಂದೂಗಳು ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟವರು.ಸಹಜವಾಗಿಯೇ ಭಾರತದಲ್ಲಿ ದೇವತೆಗಳ ವಿಶಾಲವಾದ ಮೂರ್ತಿಗಳು ಕಂಡುಬರುತ್ತವೆ.

ಹಾಗೆಯೇ ದೇವಾನುದೇವ ಶಿವನ ಮೂರ್ತಿಗಳನ್ನು ಎಲ್ಲೆಡೆ ಸ್ಥಾಪಿಸಲಾಗಿದೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿರುವ ಶಿವನ ವಿಗ್ರಹ ಭಾರತದಲ್ಲಿಯೇ ವಿಶಾಲ ಹಾಗೂ ಎತ್ತರವಾದುದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅನಂತರದ ಸ್ಥಾನವನ್ನು ವಿಜಯಪುರ ಜಿಲ್ಲೆಯ ಶಿವಗಿರಿಯಲ್ಲಿರುವ ಶಿವನ ಮೂರ್ತಿ ಹೊಂದಿದೆ

ವಿಶ್ವವಿಖ್ಯಾತ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್ ಅಂತಹ ಸ್ಮಾರಕಗಳ ಜೊತೆಗೆ ಈ ಶಿವನ ಮೂರ್ತಿಯೂ ವಿಜಯಪುರ ಪ್ರವಾಸೋದ್ಯಮಕ್ಕೆ ಗರಿಸಿಕ್ಕಿಸಿದಂತಿದೆ. ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿ ಸಿಂದಗಿ ರಸ್ತೆಯ ಹತ್ತಿರ ಸುಮಾರು 18 ಎಕರೆ ವಿಸ್ತಿರ್ಣದ ಹಸಿರುವನದ ಮಧ್ಯೆ ಮಂದಸ್ಮಿತವಾಗಿ ಕುಳಿತಿರುವ ಶಿವನ ಮೂರ್ತಿ ನಿಮಗೆ ಕಾಣಸಿಗುತ್ತದೆ.

ಇದು ದೇಶದಲ್ಲೇ ವಿಸ್ತಾರ ಹಾಗೂ ಎತ್ತರದ ಎರಡನೇ ಶಿವನ ಮೂರ್ತಿಯಾಗಿದೆ. ಒಟ್ಟು 85 ಅಡಿ ಉದ್ದವಿರುವ ಈ ಮೂರ್ತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಸಂತಕುಮಾರ ಪಾಟೀಲ ಹಾಗೂ ಅವರ ಕುಟುಂಬದವರು ನಿರ್ಮಿಸಿದ್ದಾರೆ. ಶಿವಮೊಗ್ಗದ 6 ಜನ ಶಿಲ್ಪಿಗಳು ಒಟ್ಟು 100 ಜನ ಸಹಾಯಕರೊಂದಿಗೆ ಸುಮಾರು ಒಂದು ವರ್ಷದಲ್ಲಿ ಇದನ್ನು ನಿರ್ಮಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಈ ದೈತ್ಯ ಶಿವನ ಮೂರ್ತಿಯು ಅಂದಾಜು 1500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕವನ್ನು ಹೊಂದಿದ್ದು, 1.5 ಅಡಿ ವ್ಯಾಸವುಳ್ಳವಾಗಿವೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. ಈ ಶಿವನ ಮೂರ್ತಿಯು 2006 ರಲ್ಲಿ ಪ್ರತಿಷ್ಠಾಪನೆಗೊಂಡಿತು.

ಪ್ರತಿನಿತ್ಯ ಶಿವಗಿರಿಗೆ ಸಾವಿರಾರು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಶಿವರಾತ್ರಿಯ ದಿನವಂತೂ ಶಿವಗಿರಿ ಶಿವಭಕ್ತರಿಂದ ತುಂಬಿ ಹೋಗಿರುತ್ತದೆ. ಶಿವನ ಮೂರ್ತಿಯ ಸುತ್ತಮುತ್ತ ಬಸಂತವನವೆಂಬ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ಶಿವನ ಮೂರ್ತಿಯ ಪ್ರತಿಷ್ಠಾಪನಾ ದಿನದಂದು ಬಸಂತ ಕುಮಾರ ಪಾಟೀಲರು ತಮ್ಮ ತಾಯಿ ತುಳಸಾಬಾಯಿಯವರ 58 ಕೆ.ಜಿ. ಸ್ವರ್ಣ ತುಲಾಭಾರ ಮಾಡಿದ್ದು ಒಂದು ದಾಖಲೆಯಾಗಿದೆ.

ಈ ತುಲಾಭಾರದಿಂದ ಬಂದ ಸುಮಾರು 5 ಕೋಟಿ ರೂಪಾಯಿಯನ್ನು ಬ್ಯಾಂಕಿನಲ್ಲಿ ಜಮಾ ಮಾಡಲಾಗಿದ್ದು ಅದರಿಂದ ಬಂದ ಬಡ್ಡಿ ಹಣದಿಂದ ಅನಾಥಾಶ್ರಮ, ವೃದ್ಧಾಶ್ರಮ ನಡೆಸಲು ಚಾರಿಟೆಬಲ್ ಟ್ರಸ್ಟ್ ಒಂದನ್ನು ಸ್ಥಾಪಿಸಲಾಗಿದೆ. ಶಿವಗಿರಿ ನೋಡಲು ಕೇವಲ 10 ರೂ. ಪ್ರವೇಶ ದರವಿದ್ದು, ಈ ಹಣವನ್ನು ಸಮಾಜಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಮಂದಹಾಸ ಬೀರುತ್ತಿರುವ ಹಾಗೂ ಸುಂದರ ಶಿವನ ಮೂರ್ತಿಯನ್ನು ನೀವು ವಿಜಯಪುರಕ್ಕೆ ಭೇಟಿ ನೀಡಿ ತಪ್ಪದೇ ನೋಡಿಕೊಂಡು ಹೋಗಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...