ನವದೆಹಲಿ: ಮನೆ, ಫ್ಲ್ಯಾಟ್ ಖರೀದಿದಾರರ ಹಿತಾಸಕ್ತಿಗೆ ಒತ್ತು ನೀಡಬೇಕೆಂದು ಸುಪ್ರೀಂಕೋರ್ಟ್ ಹೇಳಿದ್ದು, ಏಕರೂಪದ ಬಿಲ್ಡರ್ ಮತ್ತು ಗ್ರಾಹಕರ ಒಪ್ಪಂದಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಖರೀದಿದಾರರನ್ನು ಶೋಷಣೆ ಮಾಡುವುದನ್ನು ತಪ್ಪಿಸಲು ಏಕರೂಪದ ಒಪ್ಪಂದ ಸಹಕಾರಿಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಮನೆ, ಫ್ಲ್ಯಾಟ್ ಖರೀದಿದಾರರ ಹಿತಾಸಕ್ತಿ ರಕ್ಷಣೆಗೆ ಬಿಲ್ಡರ್ -ಖರೀದಿದಾರ ಏಕರೂಪದ ಒಪ್ಪಂದಕ್ಕಾಗಿ ಕಾನೂನು ರಚಿಸುವುದು ಸೂಕ್ತವೆಂದು ಹೇಳಿದೆ.
ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು, ಮಾದರಿ ಬಿಲ್ಡರ್ -ಖರೀದಿದಾರ ಒಪ್ಪಂದ ಜಾರಿಗೆ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗ್ರಾಹಕರಿಗೆ ಆಗುತ್ತಿರುವ ಮಾನಸಿಕ, ದೈಹಿಕ ಮತ್ತು ಹಣಕಾಸು ಹಾನಿಯನ್ನು ತಪ್ಪಿಸುವಂತೆ ಅವರು ಮನವಿ ಮಾಡಿದ್ದರು.
ಬಿಲ್ಡರ್ ಗಳು, ಪ್ರಮೊಟರ್ಸ್ ಮತ್ತು ಏಜೆಂಟರು ಏಕಪಕ್ಷೀಯ ಒಪ್ಪಂದದ ಮೂಲಕ ಗ್ರಾಹಕರನ್ನು ಶೋಷಿಸುತ್ತಾರೆ. ಗ್ರಾಹಕರು ತೊಂದರೆಗೆ ಈಡಾಗುತ್ತಾರೆ ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ ಏಕರೂಪದ ಒಪ್ಪಂದ ಜಾರಿಗೆ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.