ನವದೆಹಲಿ: ಲಾಕ್ಡೌನ್ ಜಾರಿ ಮಾಡಿದ್ದರಿಂದ ದೇಶಾದ್ಯಂತ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಸಂಚಾರ ನಾಳೆಯಿಂದ ಹಂತಹಂತವಾಗಿ ಆರಂಭವಾಗಲಿದೆ. ಇಂದು ಸಂಜೆ 4 ಗಂಟೆಯಿಂದಲೇ ಆನ್ಲೈನ್ ಬುಕಿಂಗ್ ಶುರುವಾಗಲಿದೆ.
ದೆಹಲಿಯಿಂದ ಬೆಂಗಳೂರು ಸೇರಿದಂತೆ ದೇಶದ 15 ವಿವಿಧ ನಗರಗಳಿಗೆ ವಿಶೇಷ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ. ರೈಲು ಹತ್ತುವ ಮೊದಲು ಆರೋಗ್ಯ ತಪಾಸಣೆ ನಡೆಸಲಾಗುವುದು. ರೋಗಲಕ್ಷಣ ಇಲ್ಲದವರಿಗೆ ಪ್ರವೇಶ ನೀಡಲಾಗುವುದು.
ಕೌಂಟರ್ ನಲ್ಲಿ ಟಿಕೆಟ್ ಕೊಡುವುದಿಲ್ಲ. ಪ್ರಯಾಣಿಕರು ಮಾತ್ರ ಪ್ಲಾಟ್ಫಾರ್ಮ್ ಗೆ ಬರಬೇಕಿದೆ. ಎಲ್ಲಾ ರೈಲುಗಳಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರಯಾಣ ದರ ನಿಗದಿ ಮಾಡಿದ್ದು ಮೊದಲ ಹಂತದಲ್ಲಿ ಎಸಿ ಕೋಚ್ ಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನಲಾಗಿದೆ.
ದೆಹಲಿಯಿಂದ ಬೆಂಗಳೂರು, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ, ಭುವನೇಶ್ವರ, ಚೆನ್ನೈ, ತಿರುವನಂತಪುರ, ಮಡಗಾಂವ್, ಮುಂಬೈ ಸೆಂಟ್ರಲ್ ನಿಲ್ದಾಣಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ.