ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ಈರುಳ್ಳಿ ಆವಕ ಹೆಚ್ಚಾಗಿದ್ದು ಬೆಲೆ ಕುಸಿತವಾಗಿದೆ. ಸ್ಥಳೀಯವಾಗಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆಯಲ್ಲಿ ಕುಸಿತವಾಗಿದೆ ಎನ್ನಲಾಗಿದೆ.
ಒಂದು ಕೆಜಿ ಈರುಳ್ಳಿ 10 ರೂ.ಗೆ ಮಾರಾಟವಾಗುತ್ತಿದೆ. ಈರುಳ್ಳಿ ಕಟಾವಿಗೆ ಬಂದ ಸಂದರ್ಭದಲ್ಲಿ ನೀರು ತಾಗಿದರೆ ಬೇಗನೆ ಹಾಳಾಗುತ್ತದೆ. ಕಳೆದ 15 ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಕಡಿಮೆಯಾದ ಕೂಡಲೇ ಅವಧಿಗೆ ಮುನ್ನವೇ ರೈತರು ಈರುಳ್ಳಿಯನ್ನು ಕಟಾವು ಮಾಡಿದ್ದು, ಇದರಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ.
50 ಕೆಜಿ ಚೀಲಕ್ಕೆ 350 ರಿಂದ 450 ರೂಪಾಯಿ ದರವಿದೆ. ಸಭೆ ಸಮಾರಂಭ ಶುಭಸಮಾರಂಭಗಳಿಗೆ ಅವಕಾಶ ಇಲ್ಲದಿರುವುದರಿಂದ ಹೆಚ್ಚಿನ ಈರುಳ್ಳಿ ಮಾರಾಟವಾಗುತ್ತಿಲ್ಲ. ಅನೇಕ ಮುಖಂಡರು ರೈತರಿಂದ ಈರುಳ್ಳಿಯನ್ನು ನೇರವಾಗಿ ಖರೀದಿಸಿ ವಿತರಣೆ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬಂದ ಈರುಳ್ಳಿಗೆ ಬೆಲೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.