ನವದೆಹಲಿ: ಮುಂದಿನ ಎರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಉದ್ಯಮಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಂವಾದ ನಡೆಸಿದ ಅವರು, ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದಾಗಿನಿಂದ ಅನೇಕ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಲು ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರವು ನೆರವು, ವಿನಾಯಿತಿ ನೀಡಿವೆ. ಮೂರು ತಿಂಗಳ ಇಎಂಐ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಂಕಷ್ಟದಲ್ಲಿರುವ ಜನ ಸೇರಿದಂತೆ ಎಲ್ಲರನ್ನೂ ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ದೊಡ್ಡ ದೇಶಗಳಲ್ಲಿ ಬೃಹತ್ ಪ್ಯಾಕೇಜ್ ಗಳನ್ನು ಘೋಷಿಸಲಾಗಿದೆ. ಅವುಗಳ ಆರ್ಥಿಕತೆ ದೊಡ್ಡದಾಗಿದೆ. ಭಾರತ ಸರ್ಕಾರ ಕೂಡ ಇತಿಮಿತಿಗಳ ನಡುವೆ ನೆರವು ನೀಡತೊಡಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಇಎಂಐ ಮೂರು ತಿಂಗಳು ಮುಂದೂಡಿಕೆ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ ನೆಮ್ಮದಿ ನೀಡಿದ್ದರೂ ಉದ್ಯಮಗಳ ಪರಿಸ್ಥಿತಿ ಮಾತ್ರ ತುಂಬಾ ಗಂಭೀರವಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡುವುದನ್ನು ಕಾಯುತ್ತಿದ್ದೇವೆ ಎಂದು ಹೇಳುವ ಮೂಲಕ ಸಣ್ಣ ಅತಿಸಣ್ಣ ಮತ್ತು ಮಧ್ಯಮ ವಲಯಕ್ಕೆ ಹಾಗೂ ಇತರೆ ವರ್ಗದವರಿಗೆ ಕೇಂದ್ರದಿಂದ ನೆರವು ನೀಡುವ ಸುಳಿವು ನೀಡಿದ್ದಾರೆ.