ಕೊಪ್ಪಳ: ಬಡವರಿಗೆ ಉಚಿತವಾಗಿ ಮರಳು ನೀಡಲು ಚಿಂತನೆ ನಡೆದಿದೆ. ಮನೆ ನಿರ್ಮಾಣಕ್ಕೆ ಬಳಸುವ ಮರಳಿಗೆ ಪ್ರತಿಟನ್ ಗೆ 100 ರೂಪಾಯಿ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಫ್ರೀ ಸ್ಯಾಂಡ್ ಪಾಲಿಸಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ರೈತರು, ಆಶ್ರಯ ಮನೆ, ಸಣ್ಣಮನೆ ನಿರ್ಮಿಸುವವರು ಎಲ್ಲಿಯಾದರೂ ಮರಳು ಖರೀದಿಸಬಹುದಾಗಿದೆ. 10 ಲಕ್ಷ ರೂಪಾಯಿ ಒಳಗಿನ ಕಟ್ಟಡ ನಿರ್ಮಾಣಕ್ಕೆ ಒಂದು ಟನ್ ಮರಳಿಗೆ 100 ರೂಪಾಯಿ ನಿಗದಿ ಮಾಡಲಾಗುವುದು. ಗುತ್ತಿಗೆದಾರರು, ಸರ್ಕಾರಿ ಕಟ್ಟಡ, ಅಪಾರ್ಟ್ಮೆಂಟ್, ಬಂಗಲೆ, ದೊಡ್ಡ ಕಟ್ಟಡ ನಿರ್ಮಾಣ ಮಾಡುವವರಿಗೆ ಬೇರೆ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಜಲ್ಲಿ ಕ್ರಷರ್ ಗೆ ಸಂಬಂಧಿಸಿದ ನಿಯಮಗಳಲ್ಲಿನ ಸಮಸ್ಯೆ ಸರಿಪಡಿಸಲಾಗುವುದು. ಸಂಬಂಧಿತ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ನ್ಯೂನ್ಯತೆಗಳನ್ನು ಸರಿಪಡಿಸಿ ನಿಯಮ ಸರಳೀಕರಣ ಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಾಣಿಗಳು, ದ್ವಿಚಕ್ರವಾಹನಗಳ ಮೇಲೆ ಮರಳು ಸಾಗಿಸಿದರೆ, ಆಶ್ರಯ ಮನೆ ಹಾಗೂ ಸ್ವಂತಕ್ಕೆ ಬಳಸುವ ಮರಳು ಸಾಗಿಸುವವರ ಮೇಲೆ ಎಫ್ಐಆರ್ ದಾಖಲಿಸಲ್ಲ. ಬೇರೆ ಜಿಲ್ಲೆಗಳಿಗೆ ವ್ಯಾಪಾರದ ದೃಷ್ಟಿಯಿಂದ ಮರಳು ಸಾಗಿಸುವವರ ವಿರುದ್ಧ ಕ್ರಮಕೈಗೊಂಡು ದಂಡ ಹಾಕಲಾಗುವುದು ಎಂದು ಹೇಳಲಾಗಿದೆ.