ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ನಲ್ಲಿ ಹಲವು ವರ್ಗದವರಿಗೆ ಕೊಡುಗೆ ನೀಡಲಾಗಿದೆ.
ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಪ್ಯಾಕೇಜಿನಲ್ಲಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುದ್ರಾ ಸಾಲ ಯೋಜನೆಯಡಿ 50 ಸಾವಿರ ರೂಪಾಯಿ ಸಾಲ ಪಡೆದು ಸಕಾಲಿಕವಾಗಿ ಮರುಪಾವತಿ ಮಾಡಿದವರಿಗೆ ಶೇಕಡ 2ರಷ್ಟು ಬಡ್ಡಿ ಕಡಿತ ಮಾಡಲಿದ್ದು, ಇದರಿಂದ 3 ಕೋಟಿ ಜನರಿಗೆ ಅನುಕೂಲವಾಗಲಿದೆ.
ಬೀದಿ ವ್ಯಾಪಾರಿಗಳಿಗೆ ಆರಂಭಿಕವಾಗಿ 5000 ರೂ. ವಿಶೇಷ ಸಾಲ ನೀಡಲಿದ್ದು ಮರುಪಾವತಿ ಆಧರಿಸಿ 10 ಸಾವಿರ ರೂಪಾಯಿವರೆಗೂ ಸಾಲ ನೀಡಲಾಗುವುದು. ಕಿಸಾನ್ ಕಾರ್ಡ್ ಮೂಲಕ ಸಾಲ ವಿತರಣೆಗೆ 2 ಲಕ್ಷ ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ಕಿಸಾನ್ ಕಾರ್ಡ್ ಮೂಲಕ ಹೈನುಗಾರಿಕೆಯಲ್ಲಿ ತೊಡಗಿದವರು ಮತ್ತು ಮೀನುಗಾರರಿಗೆ ಸೌಲಭ್ಯ ಕಲ್ಪಿಸಲಾಗುವುದು.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲ ನೀಡಿಕೆಗಾಗಿ ನಬಾರ್ಡ್ 30,000 ಕೋಟಿ ರೂಪಾಯಿ ಹೆಚ್ಚುವರಿ ತುರ್ತುನಿಧಿ ನೀಡಲಾಗುವುದು. ಅದೇ ರೀತಿ ಬೆಳೆ ಸಾಲ ಬಡ್ಡಿ ಮನ್ನಾ ಅವಧಿಯನ್ನು ಮೇ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.