ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ವೈರಸ್ ಕಳೆದ ಒಂದೂವರೆ ತಿಂಗಳಿನಿಂದ ಜನಜೀವನವನ್ನು ಹಿಂಡಿಹಿಪ್ಪೆ ಮಾಡಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದ್ದ ಕಾರಣ ಆರ್ಥಿಕವಾಗಿ ಸೋತು ಹೋಗಿದ್ದಾರೆ.
ಮೂರನೇ ಹಂತದ ಲಾಕ್ ಡೌನ್ ನಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅನುವು ಮಾಡಿಕೊಡಲಾಗಿದ್ದರೂ ಈ ಮೊದಲಿನಂತೆ ವ್ಯಾಪಾರ ವಹಿವಾಟು ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ಜನರ ಬಳಿ ಹಣ ಓಡಾಡುತ್ತಿಲ್ಲ. ಆದಾಯಕ್ಕಿಂತ ಖರ್ಚು ಜಾಸ್ತಿ ಆಗುತ್ತಿರುವುದರಿಂದ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ದೂರದ ಮಾತಾಗಿದೆ. ಅಲ್ಲದೆ ಬ್ಯಾಂಕುಗಳಿಂದ ತಾವು ಇಟ್ಟಿರುವ ಹಣವನ್ನು ವಾಪಸ್ ಪಡೆಯುತ್ತಿದ್ದು, ಕೆಲವರು ತಮ್ಮ ನಿಶ್ಚಿತ ಠೇವಣಿ ಹಣವನ್ನೂ ಹಿಂಪಡೆದುಕೊಂಡಿದ್ದಾರೆ.
ಇದರ ಪರಿಣಾಮ ಬ್ಯಾಂಕುಗಳು ಹಣದ ಹರಿವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಹೀಗಾಗಿ ಸಾಲ ಪಡೆಯಲು ಬಯಸುವವರಿಗೆ ಮಂಜೂರು ಮಾಡಲು ಸಾಧ್ಯವಿಲ್ಲದಂತಾಗಿದೆ. ಸಹಕಾರ ಬ್ಯಾಂಕುಗಳು ಹೆಚ್ಚಿನ ಸಂಕಷ್ಟಕ್ಕೊಳಗಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ಮೂರು ತಿಂಗಳುಗಳ ಕಾಲ ಸಾಲದ ಮೇಲಿನ ಕಂತು ಪಾವತಿಯನ್ನು ಮುಂದೂಡಿರುವುದೂ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ.