ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿದ್ದ ಲಾಕ್ಡೌನ್ ಬಹುತೇಕರ ಬದುಕನ್ನು ಅತಂತ್ರಗೊಳಿಸಿದೆ.
ಅದರಲ್ಲೂ ಜೀವನೋಪಾಯಕ್ಕಾಗಿ ಸ್ವಂತ ಊರು ತೊರೆದು ಮತ್ತೊಂದು ಊರಿಗೆ ಬಂದಿದ್ದ ವಲಸೆ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.
ವಲಸೆ ಕಾರ್ಮಿಕರು ಊರಿಗೆ ತೆರಳಲು ರೈಲ್ವೆ ಇಲಾಖೆ ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಿದ್ದು, ಪ್ರಯಾಣದ ವೇಳೆ ವಲಸಿಗ ಮಕ್ಕಳ ರಂಜನೆಗಾಗಿ ‘ಪುಟ್ ಸ್ಮೈಲ್ ಬ್ಯಾಕ್’ ಎನ್ನುವ ಧ್ಯೇಯದೊಂದಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ನೈಸರ್ಗಿಕ ಬಣ್ಣದಿಂದ ತಯಾರಿಸಿರುವ ಈ ಗೊಂಬೆಗಳು ಮಕ್ಕಳಿಗೆ ಸುರಕ್ಷಿತ ಎಂಬ ಕಾರಣಕ್ಕೆ ಚನ್ನಪಟ್ಟಣದ ಗೊಂಬೆಗಳನ್ನು ಆಯ್ಕೆ ಮಾಡಲಾಗಿದೆ.