alex Certify ಗುಡ್ ನ್ಯೂಸ್: ರಾಜ್ಯಾದ್ಯಂತ ಮತ್ತೆ ಕೈಗಾರಿಕಾ ಆದಾಲತ್, ಯುವ ಉದ್ಯಮಿಗಳಿಗೆ ಕಾರ್ಯಾಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ರಾಜ್ಯಾದ್ಯಂತ ಮತ್ತೆ ಕೈಗಾರಿಕಾ ಆದಾಲತ್, ಯುವ ಉದ್ಯಮಿಗಳಿಗೆ ಕಾರ್ಯಾಗಾರ

ಬೆಂಗಳೂರು: ದೀರ್ಘಕಾಲದಿಂದ ಕೈಗಾರಿಕಾ ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದು, ಇತ್ಯರ್ಥಪಡಿಸುವ ಸಲುವಾಗಿ ಮತ್ತೆ ‘ಕೈಗಾರಿಕಾ ಅದಾಲತ್’ ಆರಂಭಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಮುಂದಾಗಿದ್ದಾರೆ.

ಕೈಗಾರಿಕಾ ಆದಾಲತ್ ಜೊತೆಗೆ ‌ ಸಚಿವ ನಿರಾಣಿ‌ ಅವರ ಕನಸಿನಕೂಸಾದ ಬಹುನಿರೀಕ್ಷಿತ ‘ಉದ್ಯಮಿಯಾಗು-ಉದ್ಯೋಗ ನೀಡು’ ಯೋಜನೆಗೂ ಚಾಲನೆಸಿಗಲಿದೆ. ಇದರ ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಇದೇ ತಿಂಗಳ 27 ರಂದು ಕೈಗಾರಿಕಾ ಆದಾಲತ್ ನಡೆದರೆ, ಮರುದಿನವೇ(28) ರಂದು ಉದ್ಯಮಿಯಾಗು,ಉದ್ಯೋಗ ನೀಡು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಈ ಹಿಂದೆ 2008 ರಿಂದ ‌2013 ರಲ್ಲಿ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ವೇಳೆ ‌ರಾಜ್ಯದಲ್ಲಿ ಮೊದಲ ಬಾರಿಗೆ ಕೈಗಾರಿಕಾ ‌ಆದಾಲತ್ ಎಂಬ ‘ಹೊಸ ಪರಿಕಲ್ಪನೆ’ಯನ್ನು ‌ಜಾರಿಗೆ ತಂದು‌ ಬಹುಪಾಲು ಅದರಲ್ಲಿ ಯಶಸ್ವಿಯಾಗಿದ್ದರು. ಗಣಿ ಮತ್ತುಕಲ್ಲಿದ್ದಲು ಸಚಿವರಾಗಿದ್ದ ವೇಳೆಯೂ ‘ಒಂದೇ ಸೂರಿನಡಿ’ ಅರ್ಜಿಗಳನ್ನು ಇತ್ಯಾರ್ಥಗೊಳಿಸಲು ಜಿಲ್ಲಾ ಮಟ್ಟದಲ್ಲಿ ‘ಗಣಿ‌ ಆದಾಲತ್‌’ ನಡೆಸುವ ಗುರಿ ಇಟ್ಟುಕೊಂಡಿದ್ದರು.

ರಾಜ್ಯಾದ್ಯಂತ ಹಲವು ಕೈಗಾರಿಕಾ ವ್ಯಾಜ್ಯಗಳು ಬಹು ವರ್ಷಗಳಿಂದ ಬಗೆಹರಿಯದೆ ಉಳಿದಿವೆ. ಇವನ್ನು ದಾವೆದಾರರ ಸಮಕ್ಷಮದಲ್ಲಿ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆಯನ್ನು ಸಚಿವ ನಿರಾಣಿ ಅವರು ಇಟ್ಟುಕೊಂಡಿದ್ದಾರೆ.

ಕೈಗಾರಿಕಾ ಅದಾಲತ್ ಆರಂಭಿಸುವ ಮೂಲಕ ಆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವುದು‌ ಇದರ ಮೂಲ ಉದ್ದೇಶವಾಗಿದೆ. ಆದಾಲತ್ ನಡೆಸುವುದರಿಂದ ಶೇ. 75 ರಷ್ಟುಸಮಸ್ಯೆಗಳು ಸ್ಥಳೀಯವಾಗಿ ಇತ್ಯರ್ಥವಾಗುತ್ತವೆ.

ಇಲಾಖೆಯ ಸಚಿವರಾದ ಬಳಿಕ ಕೈಗಾರಿಕೆಗಳ ‌ಸ್ಥಿತಿಗತಿ ಬಗ್ಗೆಖುದ್ದಾಗಿ ತಿಳಿಯಲು ‌ಸ್ವತಃ ಸಚಿವರೇ ಅನೇಕ ಕಡೆ ಕೈಗಾರಿಕಾ‌ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬಿಡದಿ, ಹಾರೋಹಳ್ಳಿ, ಜಿಗಣಿ, ದಾಬಸ್ ಪೇಟೆ, ತುಮಕೂರಿನ ವಸಂತನರಸಪುರದಲ್ಲಿರುವ ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಜಿಲ್ಲಾ ಕೇಂದ್ರಗಳಿಗೆ ಭೇಟಿ‌ ನೀಡಿದಾಗ ಬಾಕಿ ಇರುವ ಪ್ರಕರಣಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು.

ತಕ್ಷಣವೇ ವಾಣಿಜ್ಯ ಮತ್ತು ‌ಕೈಗಾರಿಕೆ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿದೇರ್ಶಕ  ಎಚ್‌ಎಂ ರೇವಣ್ಣ ಗೌಡ, ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ ‌ಅವರು ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ‌ಇತ್ಯರ್ಥಪಡಿಸಲು‌ ಕೂಡಲೇ ಕಾರ್ಯನ್ಮೋಖರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ಇತರೆ ಸೌಲಭ್ಯಗಳನ್ನು ನೀಡಲು‌ ಸಚಿವ ‌ನಿರಾಣಿ ಅವರು‌ ತೀರ್ಮಾನಿಸಿದ್ದಾರೆ.

ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ

ಯುವಕರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸಲು ‌ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಲಿದ್ದಾರೆ. ಯುವಕರು ಉದ್ಯಮಿಗಳಾಗಲು ಪ್ರೋತ್ಸಾಹಿಸಲು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಂತಹ ನಗರಗಳಲ್ಲಿ ನಿಗದಿತ ಕೈಗಾರಿಕಾ ಅದಾಲತ್‌ಗಳ ಒಂದು ದಿನದ ನಂತರ ಕಾರ್ಯಾಗಾರಗಳು ನಡೆಯಲಿವೆ.

ಅನೇಕ ಕೈಗಾರಿಕೋದ್ಯಮಿಗಳು ಹಾಗೂ ‌ಸಂಘ‌ ಸಂಸ್ಥೆಗಳು ಸಚಿವ ನಿರಾಣಿ ಅವರ ಕೈಗಾರಿಕಾ ಅದಾಲತ್‌ಗಳು ಮತ್ತು ಉದಯೋನ್ಮುಖ ಉದ್ಯಮಿಗಳಿಗೆ ನಡೆಸಲು ಉದ್ದೇಶಿಸಿರುವ ಕಾರ್ಯಾಗಾರಗಳಿಗೆ ಮೆಚ್ಚುಗೆ ಸೂಚಿಸಿವೆ.

ಹೆಚ್ಚಿನ ವ್ಯಾಪಾರ ವಹಿವಾಟು, ಉದ್ಯಮಿ‌ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವುದರ‌ ಜೊತೆಗೆ ‌ರಾಜ್ಯದಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎನ್ನುವುದು ಬಹುತೇಕ ಉದ್ಯಮಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಇದನ್ನು ‌ಆಯೋಜಿಸಲಾಗಿದೆ.

ಯುವಕರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಈ ಕಾರ್ಯಾಗಾರಗಳ ಮೂಲಕ ಅಗತ್ಯ ತರಬೇತಿಯನ್ನು ‌ನೀಡುವ ಮೂಲಕ ಮತ್ತು ಅವರನ್ನು ಉದ್ಯಮಿಗಳನ್ನಾಗಿ ಮಾಡಲು ಪ್ರೋತ್ಸಾಹಿಸಲು ಗುರಿ ಹೊಂದಿದ್ದೇವೆ. ಉದ್ಯೋಗ ಹುಡುಕುವ ಬದಲು ಉದ್ಯೋಗ ಒದಗಿಸುವವರಾಗಿ ಹೊರಹೊಮ್ಮಬೇಕೆಂದು ನಮ್ಮ ಆಶಯವಾಗಿದೆ ಎಂದು ಸಚಿವ ಮುರುಗೇಶ್ ಆರ್. ನಿರಾಣಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...