ದೇಶದ ಶೇ.93 ರಷ್ಟು ಉದ್ಯೋಗಿಗಳು ಲಾಕ್ಡೌನ್ ಮುಗಿಯುತ್ತಿದ್ದಂತೆ ತಮ್ಮ ಕಚೇರಿಗೆ ಬರಲು ಆತಂಕಿತರಾಗಿದ್ದಾರೆ. ಅದರಲ್ಲಿ ಶೇ. 85 ರಷ್ಟು ಜನರು ತಾವು ಕಚೇರಿಗೆ ಮರಳುವ ಹೊತ್ತಿಗೆ ಅಲ್ಲಿ ಸ್ಯಾನಿಟೈಸ್ ಮಾಡಿ, ಶುದ್ಧವಾಗಿದ್ದರೆ ಬರಬಹುದು ಎಂದು ಬಯಸುತ್ತಿದ್ದಾರೆ.
ಹೌದು, FYI -ಮಿಡ್ ಮ್ಯಾಪ್ ಅಡ್ವಾನ್ಸ್ ರಿಸರ್ಚ್ ಎಂಬ ಆರೋಗ್ಯ ತಂತ್ರಜ್ಞಾನ ಸಾಮುದಾಯಿಕ ಸಂಸ್ಥೆ ಭಾರತದ ನವದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಸಣ್ಣ ಮಧ್ಯಮ ಹಾಗೂ ದೊಡ್ಡ ಕಂಪನಿಗಳ 560 ಉದ್ಯೋಗಿಗಳ ಸಮೀಕ್ಷೆಯೊಂದನ್ನು ಕೈಗೊಂಡಿದೆ. ಅದರಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ವರದಿ ಭಾರತದ ಉತ್ಪಾದಕತೆಯ ಮೇಲೆ ಭಾರೀ ಪರಿಣಾಮ ಬೀರುವ ಮುನ್ಸೂಚನೆ ನೀಡುತ್ತಿದೆ.
ಸಮೀಕ್ಷೆಗೆ ಒಳಗಾದವರಲ್ಲಿ ಶೇ. 85 ರಷ್ಟು ಪುರುಷ ಉದ್ಯೋಗಿಗಳು, ಶೇ. 15 ರಷ್ಟು ಮಹಿಳಾ ಉದ್ಯೋಗಿಗಳಾಗಿದ್ದಾರೆ. ಸಮೀಕ್ಷಾ ವರದಿಯ ಪ್ರಕಾರ ಶೇ.59 ರಷ್ಟು ಜನ ತಮ್ಮ ಆರೋಗ್ಯದ ಬಗ್ಗೆ ಆತಂಕ ಹೊಂದಿದ್ದಾರೆ. ಶೇ.25 ರಷ್ಟು ಜನ ಮಾತ್ರ ತಮ್ಮ ಆರ್ಥಿಕತೆಯೇ ಪ್ರಮುಖ ಎಂದು ಹೇಳಿದ್ದಾರೆ. ಶೇ.16 ರಷ್ಟು ಜನ ಈ ಕರೊನಾ ಲಾಕ್ಡೌನ್ ನಿಂದ ತಮಗೆ ತೊಂದರೆಯಾಗಲಿದೆ ಎಂದು ಆತಂಕಿತರಾಗಿದ್ದಾರೆ.
ಶೇ.85 ರಷ್ಟು ಉದ್ಯೋಗಿಗಳು ತಮ್ಮ ಕಚೇರಿಯಲ್ಲಿ ಸುರಕ್ಷತೆಯ ನಿಯಮಗಳನ್ನು ಪಾಲಿಸಲಿ ಎಂದು ಬಯಸುತ್ತಿದ್ದಾರೆ. ಶೇ.99 ಉದ್ಯೋಗಿಗಳು ತಮ್ಮ ಕಂಪನಿಗಳು ತಮ್ಮ ಆರೋಗ್ಯದ ಜವಾಬ್ದಾರಿ ಕಾರ್ಪೊರೇಟ್ ಹೆಲ್ತ್ ರೆಸ್ಪಾನ್ಸಿಬಿಲಿಟಿ (ಸಿಎಚ್ಆರ್) ಯೋಜನೆ ಜಾರಿಗೆ ತರಲಿ ಎಂಬ ಇಚ್ಛೆ ಹೊಂದಿದ್ದಾರೆ.
“ಭಾರತದ ನೌಕರರು ಈಗ ತಮ್ಮ ಆರೋಗ್ಯದ ಬಗ್ಗೆ ಮಹತ್ವ ನೀಡುತ್ತಿದ್ದಾರೆ. ಒತ್ತಡ, ಆತಂಕದಲ್ಲಿ ಇರುವವರಿಗಿಂತ ಖುಷಿ, ಸುರಕ್ಷತೆಯಲ್ಲಿ ಉದ್ಯೋಗಿಗಳು ಹೆಚ್ಚು ಉತ್ತಮವಾಗಿ ಕೆಲಸ ಮಾಡಬಲ್ಲರು ಎಂದು FYI ಸಂಸ್ಥೆಯ ಸಹ ಸಂಸ್ಥಾಪಕ ಅಭಿಪ್ರಾಯಪಟ್ಟಿದ್ದಾರೆ.