ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ತೀವ್ರ ನಷ್ಟ ಅನುಭವಿಸಿದ್ದರು. ಹೀಗಾಗಿ ಬಹಳಷ್ಟು ಮಂದಿ ಬೆಳೆಗಳನ್ನು ತಮ್ಮ ಹೊಲದಲ್ಲೇ ನಾಶಪಡಿಸಿದ್ದರು.
ಇದೀಗ ಲಾಕ್ ಡೌನ್ ಅವಧಿಯಲ್ಲೂ ರಾಜ್ಯ ಸರ್ಕಾರ ಮಾವು ಬೆಳೆಗಾರರಿಗೆ ಭರ್ಜರಿ ಬಂಪರ್ ಸುದ್ದಿಯೊಂದನ್ನು ನೀಡಿದೆ. ಆನ್ಲೈನ್ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್ ಜೊತೆ ಮಾವು ಮಂಡಳಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಮುಂದಿನ 45 ದಿನಗಳಲ್ಲಿ ಫ್ಲಿಪ್ಕಾರ್ಟ್ ಪ್ರಾಯೋಗಿಕವಾಗಿ ರೈತರ ಮಾವಿನ ಹಣ್ಣನ್ನು ಮಾರಾಟ ಮಾಡಲಿದೆ.
ಗಮನಾರ್ಹ ಸಂಗತಿಯೆಂದರೆ ಬೆಳೆಗಾರರೇ ಇಲ್ಲಿ ಬೆಲೆ ನಿಗದಿಪಡಿಸಲಿದ್ದು, ಮಧ್ಯವರ್ತಿಗಳ ಪಾತ್ರ ಇರುವುದಿಲ್ಲ. ಅಲ್ಲದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಲ್ಪ್ (ಮಾವಿನ ತಿರುಳು) ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.