ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಸಿಐಐ (Confederation of India Industries) ಮಹತ್ವದ ಯೋಜನೆಯೊಂದನ್ನು ಮುಂದಿಟ್ಟಿದೆ. ಇನ್ನು ಮುಂದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಬದಲು, ಕೇವಲ ಕೆಲವೇ ನಿಮಿಷಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಲು ‘ಏರ್ ಟ್ಯಾಕ್ಸಿ’ (Air Taxi) ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಪ್ರತ್ಯೇಕ ರಸ್ತೆ ಅಥವಾ ಜಾಗದ ಅವಶ್ಯಕತೆ ಇಲ್ಲದೆ, ಕಟ್ಟಡಗಳ ಮೇಲ್ಛಾವಣಿಯನ್ನೇ ಲ್ಯಾಂಡಿಂಗ್ ಪ್ಯಾಡ್ಗಳಾಗಿ ಬಳಸಿಕೊಳ್ಳುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ದೆಹಲಿಯ ಗುರುಗ್ರಾಮ, ಕನ್ನಾಟ್ ಪ್ಲೇಸ್ ಮತ್ತು ನೋಯ್ಡಾದ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಾಯೋಗಿಕ ಕಾರಿಡಾರ್ ಅನ್ನು ಆರಂಭಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಯೋಜನೆಯು ಯಶಸ್ವಿಯಾದರೆ ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಆರಂಭಿಕ ಹಂತದಲ್ಲಿ ಈ ಏರ್ ಟ್ಯಾಕ್ಸಿಗಳನ್ನು ತುರ್ತು ಚಿಕಿತ್ಸೆಗಾಗಿ ಅಂಗಾಂಗ ವರ್ಗಾವಣೆ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಕಟ್ಟಡಗಳ ಮೇಲ್ಛಾವಣಿಯೇ ನಿಲ್ದಾಣ: ನಗರ ಪ್ರದೇಶಗಳಲ್ಲಿ ಏರ್ ಟ್ಯಾಕ್ಸಿ ನಿಲ್ದಾಣಗಳಿಗಾಗಿ (Vertiports) ಜಮೀನು ಖರೀದಿಸುವುದು ಅತಿ ದುಬಾರಿಯಾಗುವುದರಿಂದ, ಅಸ್ತಿತ್ವದಲ್ಲಿರುವ ಆಸ್ಪತ್ರೆಗಳು, ತಾಂತ್ರಿಕ ಪಾರ್ಕ್ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲ್ಛಾವಣಿಗಳನ್ನು ಬಳಸಿಕೊಳ್ಳುವುದು ಈ ಯೋಜನೆಯ ವಿಶೇಷತೆ. ಪ್ರಸ್ತುತ ಡಿಜಿಸಿಎ (DGCA) ನಿಯಮಗಳ ಪ್ರಕಾರ ವಾಣಿಜ್ಯ ಬಳಕೆಯ ಏರ್ ಟ್ಯಾಕ್ಸಿಗಳಿಗೆ ರೂಫ್ಟಾಪ್ ಲ್ಯಾಂಡಿಂಗ್ಗೆ ಅನುಮತಿ ಇಲ್ಲದಿದ್ದರೂ, ಶೀಘ್ರದಲ್ಲೇ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ ಹೊಸ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.
ಹಣಕಾಸು ನೆರವು ಮತ್ತು ಜಾರಿ: ಈ ಸುಧಾರಿತ ವಾಯುಯಾನ ವ್ಯವಸ್ಥೆಯನ್ನು ಜಾರಿಗೆ ತರಲು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ವಿಶೇಷ ನಿಧಿಗಳನ್ನು ಮೀಸಲಿಡಬೇಕು ಎಂದು ವರದಿಯಲ್ಲಿ ಕೋರಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಕಿಂಜರಾಪು ಅವರು ಈ ವರದಿಯನ್ನು ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಡ್ರೋನ್ ವಿತರಣೆ, ವೈದ್ಯಕೀಯ ಲಾಜಿಸ್ಟಿಕ್ಸ್ ಮತ್ತು ಏರ್ ಅಂಬುಲೆನ್ಸ್ ಸೇವೆಗಳ ಮೂಲಕ ಈ ಪ್ರಯೋಗ ಹಂತಹಂತವಾಗಿ ಜನಸಾಮಾನ್ಯರಿಗೂ ತಲುಪಲಿದೆ.

