ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ 8.1 ಕೋಟಿ ರೈತರ ಖಾತೆಗೆ ತಲಾ 2 ಸಾವಿರ ರೂ. ಪಾವತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 20 ಲಕ್ಷ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು ಪ್ಯಾಕೇಜ್ ನಲ್ಲಿ ಘೋಷಿತ ಯೋಜನೆಗಳ ಬಗ್ಗೆ 5ನೇ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ಯಾಕೇಜ್ ನೀಡಲಾಗಿತ್ತು. ಎರಡನೇ ಹಂತದಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ. ಮೂರನೇ ಹಂತದಲ್ಲಿ ಕಾರ್ಮಿಕ ವಲಯಕ್ಕೆ ಪ್ಯಾಕೇಜ್ ಹಂಚಿಕೆ ನೀಡಲಾಗಿತ್ತು. ನಾಲ್ಕನೇ ಹಂತದಲ್ಲಿ ಕಲ್ಲಿದ್ದಲು, ಗಣಿಗಾರಿಕೆ ವಿಮಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆರ್ಥಿಕ ನೆರವು ಯೋಜನೆ ಪ್ರಕಟಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಸಂಕಟದ ಮಧ್ಯೆ ಅನೇಕ ಅವಕಾಶಗಳಿವೆ. ಸ್ವಾವಲಂಬಿ ಭಾರತ ಕಟ್ಟಲು ಕ್ರಮಕೈಗೊಳ್ಳಲಾಗಿದೆ. ಭೂಮಿ, ಕಾರ್ಮಿಕರು, ಹಣ, ಕಾನೂನು ಮಾರ್ಗಗಳ ಮೂಲಕ ದೇಶವನ್ನು ಕಟ್ಟಲಾಗುವುದು. ಪ್ರಾಣ ಇದ್ದರೆ ಪ್ರಪಂಚ ಎಂದು ಪ್ರಧಾನಿ ಮೋದಿ ಹೇಳಿದ್ದು, ಆಹಾರ ನೀಡುವ ಮೂಲಕ ಬಡವರಿಗೆ ನಾವು ಉಪಕಾರ ಮಾಡಲಿಲ್ಲ ಅವರ ಹಸಿವು ನೀಗಿಸುವುದು ನಮ್ಮ ಕರ್ತವ್ಯವಾಗಿತ್ತು. ಜನ ಸಂಕಷ್ಟಲ್ಲಿದ್ದವರಿಗೆ ಸಹಾಯಹಸ್ತ ಚಾಚಿದ್ದಾರೆ ಎಂದು ತಿಳಿಸಿದ್ದಾರೆ.