ಲಖನೌ: ಬಾಲಿವುಡ್ನ ಪ್ರಸಿದ್ಧ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಲಗಾನ್ ಚಿತ್ರದ ‘ಮಿತ್ವಾ’ ಹಾಡನ್ನು ಸಮರ್ಪಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಸಂಬಂಧ ಬುಧವಾರ ಯೋಗಿ ಆದಿತ್ಯನಾಥ ಅವರ ಅಧ್ಯಕ್ಷತೆಯಲ್ಲಿ ಫಿಲ್ಮ್ ಸಿಟಿ ಸಮಿತಿ ಸಭೆ ನಡೆಯಿತು. ಸಮಿತಿಯ ಭಾಗವಾಗಿರುವ 64 ವರ್ಷದ ಉದಿತ್ ನಾರಾಯಣ ಅವರು ಸಭೆಯಲ್ಲಿ ಹಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಡು ಮುಗಿಯುತ್ತಿದ್ದಂತೆ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರೆ, ಯೋಗಿ ಆದಿತ್ಯನಾಥ್ ನಮಸ್ಕಾರ ಮಾಡಿ ಗೌರವ ಸಲ್ಲಿಸಿದರು.
ಸಭೆಯಲ್ಲಿ ನಟ, ರಾಜಕಾರಣಿ ರವಿ ಕೃಷ್ಣಾ, ಹಾಡುಗಾರ ಕೈಲಾಶ್ ಖೇರ್, ಹಾಸ್ಯನಟ ರಾಜು ಶ್ರೀವಾಸ್ತವ, ನಟ ಮನೋಜ್ ಜೋಶಿ ಇತರರು ಇದ್ದರು. “ಭಾರತೀಯ ಸಿನೆಮಾಕ್ಕೆ ಹೊಸ ವೇದಿಕೆ ಬೇಕಿದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಕೇವಲ ಉತ್ತರ ಪ್ರದೇಶ ಮಾತ್ರವಲ್ಲ ನಾವು ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ಯೋಚಿಸೋಣ”ಎಂದು ಯೋಗಿ ಆದಿತ್ಯನಾಥ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.