ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ನಟ ಸೋನು ಸೂದ್ ಅವರ ಸಮಾಜ ಸೇವೆಯ ಸಾಹಸಗಾಥೆ ಒಂದೆರಡಲ್ಲ. ತಮ್ಮ ಸ್ನೇಹಿತರೊಡಗೂಡಿ ಘರ್ ಭೆಜೋ ಅಭಿಯಾನ ನಡೆಸುವ ಮೂಲಕ ಸಾವಿರಾರು ಜನರನ್ನು ಮುಂಬೈನಿಂದ ತಮ್ಮ ಊರುಗಳಿಗೆ ಕಳಿಸಿ ಭಾರತೀಯರ ಮನಗೆದ್ದಿದ್ದಾರೆ.
ಇದೀಗ ಅವರ ಸೇವಾ ವ್ಯಾಪ್ತಿ ಮುಂಬೈನಿಂದ ಕೇರಳಕ್ಕೂ ಹಬ್ಬಿದೆ. ಕೇರಳದಲ್ಲಿ ಸಿಲುಕಿಕೊಂಡಿದ್ದ 117 ಒಡಿಶಾದ ಬಾಲಕಿಯರನ್ನು ಅವರು ಏರ್ ಲಿಫ್ಟ್ ಮಾಡಿಸಿ ಅವರ ಮನೆಗಳಿಗೆ ಕಳಿಸಿಕೊಡಲು ಶ್ರಮಿಸಿದ್ದಾರೆ.
ಭುವನೇಶ್ವರದ ಸ್ನೇಹಿತರ ಕೋರಿಕೆಯಂತೆ ಸಹಾಯ ಮಾಡಲು ನಿರ್ಧರಿಸಿದ ಸೋನು ಸೂದ್, ಕೊಚ್ಚಿ ಮತ್ತು ಭುವನೇಶ್ವರ ವಿಮಾನ ನಿಲ್ದಾಣಗಳನ್ನು ಈ ಕಾರ್ಯಕ್ಕಾಗಿ ತೆರೆಯಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವ ಮೂಲಕ ಈ ಪ್ರಕ್ರಿಯೆ ನಡೆಸಿದರು. ಬಾಲಕಿಯರ ರಕ್ಷಿಸಲು ಬೆಂಗಳೂರಿನಿಂದ ವಿಶೇಷ ವಿಮಾನವನ್ನು ತರಿಸಿಕೊಳ್ಳಲಾಗಿತ್ತು. ಸೋನು ಸೂದ್ ಅವರ ಈ ಪ್ರಯತ್ನವನ್ನು ರಾಜ್ಯಸಭಾ ಸಂಸದ ಅಮರ್ ಪಟ್ನಾಯಕ್ ಅಭಿನಂದಿಸಿದ್ದಾರೆ.
ಈ ಹಿಂದೆ ಸೋನು ಸೂದ್ ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಕರ್ನಾಟಕ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಆಂಧ್ರ ಮುಂತಾದ ರಾಜ್ಯಗಳಿಗೆ ಕಳುಹಿಸಿ ಕೊಡುವಲ್ಲಿ ಶ್ರಮಿಸಿದ್ದರಲ್ಲದೇ, ಸಹಾಯವಾಣಿಯನ್ನು ಆರಂಭಿಸಿದ್ದರು.