ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಉದ್ಯೋಗದಾತರು ಹುದ್ದೆಗಳನ್ನು ಕಡಿತ ಮಾಡುತ್ತಿದ್ದು, ಹೀಗಾಗಿ ಬಹುತೇಕರು ನಿರುದ್ಯೋಗಿಗಳಾಗಿದ್ದಾರೆ.
ಲಾಕ್ ಡೌನ್, ಸಿನಿಮಾ ಮಂದಿಯ ಮೇಲೆ ಬಹಳಷ್ಟು ಪರಿಣಾಮ ಬೀರಿದ್ದು, ಸಣ್ಣಪುಟ್ಟ ನಟ-ನಟಿಯರು ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಚಿತ್ರರಂಗದ ಚಟುವಟಿಕೆ ನಡೆಸಲು ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲವಾದ ಕಾರಣ ಇದು ಅನಿಶ್ಚಿತತೆಯಲ್ಲಿದೆ.
ಇದರ ಮಧ್ಯೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಟನೊಬ್ಬ ಜೀವನೋಪಾಯಕ್ಕಾಗಿ ದಕ್ಷಿಣ ದೆಹಲಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಸೋಲಂಕಿ ದಿವಾಕರ್ ಬಾಲಿವುಡ್ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಕೆಲಸವಿಲ್ಲದಂತಾಗಿದೆ.
ಆದರೆ ಕುಟುಂಬವನ್ನು ಸಲಹುವ ಹೊಣೆಗಾರಿಕೆ ಇರುವ ಕಾರಣ ಹಾಗೂ ಮನೆ ಬಾಡಿಗೆ ಕಟ್ಟಬೇಕಾಗಿರುವುದರಿಂದ ಅನಿವಾರ್ಯವಾಗಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಯಾವುದೇ ಕೆಲಸ ಮೇಲೆ ಅಥವಾ ಕೀಳಲ್ಲ ಎನ್ನುವ ಅವರು, ನಟ ರಿಷಿ ಕಪೂರ್ ಜೊತೆ ಅಭಿನಯಿಸುವ ಅವಕಾಶವೊಂದು ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.