ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಹೀಗಿದ್ದರೂ ಕೂಡ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಿರೂಪಕ ಅಕುಲ್ ಬಾಲಾಜಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಜಡೆ ಲಗಮೇನಹಳ್ಳಿಯಲ್ಲಿ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ಇದ್ದು, ಈ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ರೆಸಾರ್ಟ್ ಅನ್ನು ಅಕುಲ್ ಬಾಲಾಜಿ ಬಾಡಿಗೆ ನೀಡಿದ್ದು ನಿನ್ನೆ ತಡರಾತ್ರಿ 20 ಕ್ಕೂ ಅಧಿಕ ಮಂದಿ ರೆಸಾರ್ಟ್ ಗೆ ಬಂದಿದ್ದಾರೆ.
ಅಪರಿಚಿತರು ಗ್ರಾಮಕ್ಕೆ ಬಂದಿರುವುದರಿಂದ ಆತಂಕಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಕುಲ್ ಬಾಲಾಜಿ ಮತ್ತು ಅವರ ಪಾಲುದಾರ ಶ್ರೀನಿವಾಸ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.