ಮಹಾರಾಷ್ಟ್ರ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸೆಡ್ಡು ಹೊಡೆದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಹಿಮಾಚಲ ಪ್ರದೇಶಕ್ಕೆ ವಾಪಸಾಗಿದ್ದು, ನಿಯಮಾವಳಿ ಪ್ರಕಾರ ಹತ್ತು ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಕಂಗನಾ ರಣಾವತ್ ಸೋಮವಾರ ಹಿಮಾಚಲ ಪ್ರದೇಶದ ತಮ್ಮ ಮನೆಗೆ ತಲುಪಿದ್ದು, ಅವರು ಈ ವಾರದ ಆರಂಭದಲ್ಲಿ ಮುಂಬೈನಲ್ಲಿದ್ದರು. ಅಲ್ಲಿಗೆ ಹಿಂದಿರುಗುವ ಮೊದಲು ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೊಶಿಯಾರಿಯನ್ನು ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿದ್ದರು.
ಹಿಮಾಚಲ ಪ್ರದೇಶದ ಸರ್ಕಾರದ ಕೋವಿಡ್ -19 ಮಾರ್ಗಸೂಚಿಗಳ ಪ್ರಕಾರ, ರಣಾವತ್ ಅವರನ್ನು 10 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ವಿಚಾರದಲ್ಲಿ ಸಿಡಿದ ಕಂಗನಾ ʼಮಹಾʼ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿ ದೇಶದ ಗಮನ ಸೆಳೆದರು. ಮುಂಬೈಯನ್ನು “ಪಾಕಿಸ್ತಾನ ಆಕ್ರಮಿತ ಕಾಶ್ಮೀರ” ಕ್ಕೆ ಹೋಲಿಸಿ ಶಿವಸೇನೆ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದರು.
ಇದಕ್ಕೆ ಪ್ರತಿಯಾಗಿ, ಅಲ್ಲಿನ ಸ್ಥಳೀಯ ಆಡಳಿತ ಕಂಗನಾಗೆ ಸೇರಿದ ಕಟ್ಟಡ ಅಕ್ರಮ ಎಂದು ಕೆಡವಲು ಮುಂದಾಯಿತು. ಆದರೆ ಮುಂಬೈ ನ್ಯಾಯಾಲಯವು ಈ ಕಾರ್ಯಾಚರಣೆಗೆ ತಡೆ ನೀಡಿದೆ. ಈ ವಿಚಾರ ಇಷ್ಟಕ್ಕೆ ನಿಲ್ಲದೇ, ಸಿಎಂಪುತ್ರ ಆದಿತ್ಯ ಠಾಕ್ರೆಯನ್ನೂ ಈ ಪ್ರಕರಣದಲ್ಲಿ ಈಗ ಎಳೆದು ತರಲಾಗಿದೆ.