ಟೀಮ್ ಇಂಡಿಯಾ ನಾಯಕರಾಗಿದ್ದ ಅನಿಲ್ ಕುಂಬ್ಳೆ ಒಬ್ಬ ಜೆಂಟಲ್ಮನ್ ಕ್ರಿಕೆಟ್ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹೀಗಾಗಿ ಅನಿಲ್ ಕುಂಬ್ಳೆ ಅವರನ್ನು ಟೀಮ್ ಇಂಡಿಯಾ ಆಟಗಾರರು ಮಾತ್ರವಲ್ಲದೆ ವಿದೇಶೀ ಕ್ರಿಕೆಟಿಗರೂ ಕೊಂಡಾಡುತ್ತಾರೆ.
ಇದೀಗ ಟೀಮ್ ಮಾಜಿ ಆಟಗಾರ ಗೌತಮ್ ಗಂಭೀರ್, ಅನಿಲ್ ಕುಂಬ್ಳೆ ನಾಯಕರಾಗಿದ್ದ ಸಂದರ್ಭದಲ್ಲಿ ಅವರು ತೋರಿದ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಗೌತಮ್ ಗಂಭೀರ್, ಅನಿಲ್ ಕುಂಬ್ಳೆ ಅವರಿಗಾಗಿ ನಾನು ಪ್ರಾಣ ಬೇಕಾದರೂ ಕೊಡಲು ಸಿದ್ಧನಿದ್ದೆ ಎಂದು ತಿಳಿಸಿದ್ದಾರೆ.
2008 ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ನಾನು ಮತ್ತು ವೀರೇಂದ್ರ ಸೆಹ್ವಾಗ್ ಭೋಜನ ಮಾಡುತ್ತಿದ್ದ ವೇಳೆ ಬಂದ ನಾಯಕ ಅನಿಲ್ ಕುಂಬ್ಳೆ, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನೀವಿಬ್ಬರು ಆರಂಭಿಕರಾಗಿ ಕಣಕ್ಕಿಳಿಯುತ್ತೀರಿ. ಈ ಇನ್ನಿಂಗ್ಸ್ ಗಳಲ್ಲಿ ನೀವು ಶೂನ್ಯ ಸಂಪಾದನೆ ಮಾಡಿದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಅವರ ಮಾತು ಕೇಳಿ ನನಗೆ ಹೃದಯ ತುಂಬಿ ಬಂತು ಎಂದು ಹೇಳಿರುವ ಗೌತಮ್ ಗಂಭೀರ್, ಆ ಸಂದರ್ಭದಲ್ಲಿ ನಾನು ಯಾರಿಗಾದರೂ ಪ್ರಾಣ ಬೇಕಾದರೂ ಕೊಡಬೇಕೆಂದರೆ ಅದು ಅನಿಲ್ ಕುಂಬ್ಳೆ ಅವರಿಗೆ ಎಂದು ತೀರ್ಮಾನಿಸಿದೆ ಎಂದಿದ್ದಾರೆ.