ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಯೊಂದರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನ್ಯಾಯಾಲಯದ ಆವರಣದೊಳಕ್ಕೆ ಕಾಡಾನೆಯೊಂದು ನುಗ್ಗಿ ಬಂದಿತ್ತು. ಡಿಸೆಂಬರ್ 27 ರ ಬುಧವಾರ ಹರಿದ್ವಾರದ ರೋಶನಾಬಾದ್ ನೆರೆಹೊರೆಯಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣಕ್ಕೆ ಕಾಡಾನೆ ನುಗ್ಗಿತ್ತು.
15 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ ಕಾಡಾನೆ ನ್ಯಾಯಾಲಯದ ಮುಖ್ಯ ದ್ವಾರವನ್ನು ಮುರಿದು ನ್ಯಾಯಾಲಯದ ಆವರಣ ಪ್ರವೇಶಿಸಿದೆ. ಭಯಭೀತರಾದ ಜನರು ನ್ಯಾಯಾಲಯ ಪ್ರವೇಶಿಸಲು ಹೆದರಿದರು.
ಆನೆಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆನೆ ದಾಳಿ ಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ನ್ಯಾಯಾಲಯದ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಆನೆ ಕೋರ್ಟ್ ನ ಲೋಹದ ಗೇಟ್ ಅನ್ನು ಒಡೆದು ಗೋಡೆಗೆ ಹಾನಿ ಮಾಡಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಕ್ಷಣ ಸ್ಥಳಕ್ಕಾಗಮಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಬೆದರಿಸಿ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ ಕಳುಹಿಸಿದರು.