alex Certify ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಪೆಟ್ ಶಾಪ್ ಗಳು ನಿಯಮಗಳನ್ನು ಪಾಲನೆ ಮಾಡದೆ ಮಳಿಗೆಗಳನ್ನು ನಡೆಸುತ್ತಿದ್ದು, ನೋಂದಣಿ ಆಗದ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿರುವ ಪೆಟ್ ಶಾಪ್ ಮತ್ತು ನಾಯಿ ತಳಿ ಸಂವರ್ಧನ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲು ಇಂದು ನಡೆದ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ವಿಕಾಸಸೌಧದಲ್ಲಿ ನಡೆದ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳನ್ನು ಯಾವುದೇ ಪರವಾನಗಿ ಹಾಗೂ ನೋಂದಣಿ ಇಲ್ಲದೇ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೇ, ಅತ್ಯಂತ ಇಕ್ಕಟ್ಟಾದ ಗಾಳಿ ಬೆಳಕು ಇಲ್ಲದಂತಹ ಮಳಿಗೆಯಲ್ಲಿ ಕೂಡಿಹಾಕಿ ವ್ಯವಹಾರ ಮಾಡುತ್ತಿರುವುದರ ಕುರಿತು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಅಂತಹ ಮಳಿಗೆಗಳ ವಿರುದ್ದ  ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಿ ಎಂದು ಸೂಚನೆ ನೀಡಿದ್ದಾರೆ.

ನೋಂದಣಿ ಇಲ್ಲದ ಮಳಿಗೆಗೆ ಬೀಗ

ಕಡ್ಡಾಯವಾಗಿ ಪೆಟ್ ಶಾಪ್ ನಡೆಸುವವರು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕ 5 ಸಾವಿರ ರೂ. ಇದ್ದು, 5 ವರ್ಷದ ಅವಧಿಗೆ ಪೆಟ್ ಶಾಪ್ ಗಳಿಗೆ ಹಾಗೂ 2 ವರ್ಷದ ಅವಧಿಗೆ ನಾಯಿ ತಳಿ ಸಂವರ್ಧನಾ ಕೇಂದ್ರಕ್ಕೆ  ಅನುಮತಿ ನೀಡಲಾಗುತ್ತದೆ. ಪಶುಸಂಗೋಪನೆ ಇಲಾಖೆಯ ಸ್ಥಳಿಯ ವೈದ್ಯಾಧಿಕಾರಿ ಬಂದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಮೇಲೆ ಮಾತ್ರ ನೋಂದಣಿ ದೊರೆಯುತ್ತದೆ. ಪ್ರಾಣಿ ಕಲ್ಯಾಣ ಮಂಡಳಿಯ ನೋಂದಣಿ ನೀಡಿದ ನಂತರ ಸ್ಥಳಿಯ ನಗರ ಪಾಲಿಕೆಗಳು ಪರವಾನಗಿ ನೀಡಬೇಕು. ಅಲ್ಲದೇ, ಅಖಲ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಪೆಟ್ ಶಾಪ್ ಮತ್ತು ನಾಯಿ ತಳಿ ಸಂವರ್ಧನಾ ಕೇಂದ್ರಗಳು ಇರಬೇಕು.

ಅನಧಿಕೃತ ನಾಯಿ ತಳಿ ಸಂವರ್ಧನೆಗೆ ಅವಕಾಶವಿಲ್ಲ

ರಾಜ್ಯದಲ್ಲಿ ಸುಮಾರು 10 ಕ್ಕೂ ಹೆಚ್ಚು ಜನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ತಳಿ ಸಂವರ್ಧನೆಗೆ ನೋಂದಣಿ ಮಾಡಿಕೊಳ್ಳಲು ಆಸಕ್ತಿ ತೋರಿದ್ದಾರೆ. ಆದರೆ, ರಾಜ್ಯದಲ್ಲಿ ಅವೈಜ್ಞಾನಿಕವಾಗಿ ನಾಯಿ ತಳಿ ಸಂವರ್ಧನೆ ಮನೆಗಳಲ್ಲಿ, ಫಾರ್ಮ್ ಗಳಲ್ಲಿ ನಡೆಯುತ್ತಿದ್ದು, ಇವುಗಳಿಗೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಕಡಿವಾಣ ಹಾಕಲು ಪಶುಶಂಗೋಪನೆ ಇಲಾಖೆ ಮುಂದಾಗಿದೆ. ದೇಶದಲ್ಲಿ ನಾಯಿ ತಳಿ ವ್ಯಾಪಾರ ಮತ್ತು ವ್ಯವಹಾರ ಅತೀ ದೊಡ್ಡ ಮಟ್ಟದಲ್ಲಿರುವುದರಿಂದ ಹಣದ ಆಸೆಗಾಗಿ ಮುದ್ದು ಪ್ರಾಣಿಗಳನ್ನು ಅವೈಜ್ಞಾನಿಕವಾಗಿ ಸಂವರ್ಧನೆ ನಡೆಸುತ್ತಿರುವುದು ಶೋಚನೀಯ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವಂತ ಉದೋಗಕ್ಕೆ ಅವಕಾಶ

ರಾಜ್ಯದಲ್ಲಿ ನಾಯಿ, ಮೊಲ, ಬೆಕ್ಕು ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳ ತಳಿ ಸಂವರ್ಧನೆ ನಡೆಸಲು ಆಸಕ್ತಿ ಇದ್ದವರಿಗೆ ಪಶುಸಂಗೋಪನೆ ಇಲಾಖೆಯಿಂದ ಉಚಿತವಾಗಿ ತಳಿ ಸಂವರ್ಧನೆಯ ತರಬೇತಿ ನೀಡಲಾಗುತ್ತದೆ. ಜಗತ್ತಿನಾದ್ಯಂತ ಉತ್ತಮ ತಳಿ ಮತ್ತು ಮುದ್ದು ಪ್ರಾಣಿಗಳಿಗೆ ಬೇಡಿಕೆ ಇರುವುದರಿಂದ ಇದನ್ನೆ ಉದ್ಯೋಗ ಮಾಡಿಕೊಳ್ಳುವವರಿಗೆ ಇಲಾಖೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪಶುಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳು ರಾಜ್ಯಾದ್ಯಂತ ಇರುವುದರಿಂದ ಆಸಕ್ತ ಯುವಕ/ಯುವತಿಯರು ಈ ಕುರಿತಾಗಿ ಮಾಹಿತಿ ಪಡೆದು ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದರು.

ಸಭೆಯಲ್ಲಿ ಕಾರ್ಕಳದ ಶಾಸಕ ಸುನೀಲ್ ಕುಮಾರ್, ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ ಪಾಳೇಗಾರ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...