ಬೆಂಗಳೂರು : 2024-25ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
2024-25ನೇ ಸಾಲಿನ ಪ್ರತಿ ಆದರ್ಶ ವಿದ್ಯಾಲಯದ 6ನೇ ತರಗತಿಗೆ 120 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಆಯ್ಕೆ ಪರೀಕ್ಷೆ ನಡೆಸಬೇಕಾಗಿರುತ್ತದೆ. ಈ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯನ್ನು ಸಮಗ್ರ ಶಿಕ್ಷಣ-ಕರ್ನಾಟಕ ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ವತಿಯಿಂದ ಜಂಟಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಆಯ್ಕೆ ಪರೀಕ್ಷೆಯನ್ನು ನಡೆಸಲು ಜಿಲ್ಲಾ ಉಪನಿರ್ದೇಶಕರು(ಆಡಳಿತ), ಉಪನಿರ್ದೇಶಕರು ಅಭಿವೃದ್ಧಿ), ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರು ಮತ್ತು ಐದನೆಯ ತರಗತಿಗಳು ನಡೆಯುತ್ತಿರುವ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಅಗತ್ಯ ಕ್ರಮವಹಿಸಬೇಕಾಗುತ್ತದೆ.
ಪ್ರಸಕ್ತ ಸಾಲಿನ ಪರೀಕ್ಷಾ ನೊಂದಣಿ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಪ್ರಚಾರ ನೀಡಲು ತಿಳಿಸಿದೆ ಹಾಗೂ ಜನಪ್ರತಿನಿದಿಗಳಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳುವುದು, ದಾಖಲಾತಿ ಪ್ರಕ್ರಿಯೆಯನ್ನು online ಮೂಲಕ ನಡೆಸುತ್ತಿರುವುದರಿಂದ, ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಮಾರ್ಗಸೂಚಿ / ಸುತ್ತೋಲೆಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಸೂಚನೆಗಳನ್ನು ಅನುಸರಿಸಿ ನಿರ್ವಹಿಸುವುದರೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ತಿಳಿಸಿದೆ.
ಅರ್ಜಿ ಸಲ್ಲಿಸಲು ಅರ್ಹತೆ:
2023-24ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ಮೂಲ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪರೀಕ್ಷೆಯ ವಿವರಗಳು:
ಆಯ್ಕೆ ಪರೀಕ್ಷೆಗೆ 5ನೇ ತರಗತಿಯ ಪಠ್ಯ ಪುಸ್ತಕ/ ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕನ್ನಡ, ಸಾಮಾನ್ಯ ಜ್ಞಾನ (ಜನರಲ್ ನಾಲೆಡ್ಜ್) (10%) ಮತ್ತು ಸಾಮಾನ್ಯ ಬೌದ್ಧಿಕ ಸಾಮರ್ಥ್ಯ (10%) – ಇವುಗಳನ್ನು ಪರಿಗಣಿಸಲಾಗುವುದು. ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ (objective type) ಪ್ರಶ್ನೆಗಳನ್ನು ಹೊಂದಿದ್ದು, ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿರುತ್ತವೆ. ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ತಲಾ 01 ಅಂಕದಂತೆ ಇದ್ದು 100 ಪ್ರಶ್ನೆಗಳಿರುತ್ತವೆ.
ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳು. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿನ ಕೊಠಡಿಗಳಲ್ಲಿ ಹಾಜರಿರಬೇಕು.