ನವದೆಹಲಿ: ಮುಂಬೈ ಸಿಎಸ್ಎಂಟಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಬಡಿಸಿದ ಆಹಾರದ ಚಿತ್ರವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಭಾರತೀಯ ರೈಲ್ವೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಯೋಗೇಶ್ ಮೋರ್ ಎಂಬ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದಾರೆ. ಡಿಸೆಂಬರ್ 16 ರಂದು ತಮ್ಮ ಎರಡೂವರೆ ವರ್ಷದ ಮಗಳಿಗೆ ಆಹಾರವನ್ನು ಆರ್ಡರ್ ಮಾಡಿದಾಗ ಅದರಲ್ಲಿ ಸತ್ತ ಜಿರಳೆ ಇರುವುದನ್ನು ಅವರು ನೋಡಿದ್ದಾರೆ. ದೆಹಲಿಯಿಂದ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಆಮ್ಲೆಟ್ ತರಿಸಿದ್ದರು. ಅದರಲ್ಲಿ ಸತ್ತ ಜಿರಳೆ ಇತ್ತು.
ಇದನ್ನು ಕಂಡು ಶಾಕ್ ಆಗಿರುವ ಅವರು ಅದರ ಫೋಟೋ ತೆಗೆದು ಶೇರ್ ಮಾಡಿದ್ದಾರೆ. ಇದನ್ನು ನೋಡದೇ ತಿಂದಿದ್ದರೆ ನನ್ನ ಎರಡೂವರೆ ವರ್ಷದ ಮಗಳಿಗೆ ಏನಾದರೂ ಸಂಭವಿಸಿದಲ್ಲಿ, ಅದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೇ ಸೇವಾ ಸಂಸ್ಥೆಯು, ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಸರ್, ದಯವಿಟ್ಟು ನಿಮ್ಮ ಮಾಹಿತಿ ನೀಡಿ ಎಂದು ಪ್ರತಿಕ್ರಿಯೆ ನೀಡಲಾಗಿದೆ. ಆದರೆ ಈ ಫೋಟೋ ನೋಡಿ ನೆಟ್ಟಿಗರು ರೈಲ್ವೆ ಇಲಾಖೆಗೆ ಛೀಮಾರಿ ಹಾಕುತ್ತಿದ್ದಾರೆ.