ಹಾವೇರಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹಾವೇರಿಯ ನವೀನ್ ವೈದ್ಯನಾಗಿ ಮನೆಗೆ ಮರಳಬೇಕಿತ್ತು. ತಂದೆ-ತಾಯಿ ಖುಷಿಯಿಂದ ಆತನನ್ನು ಸ್ವಾಗತಿಸಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಮೃತದೇಹವನ್ನು 20 ದಿನಗಳ ನಂತರ ಸ್ವಗ್ರಾಮಕ್ಕೆ ತರಲಾಗಿದೆ.
ಅಂತಿಮ ದರ್ಶನದ ಬಳಿಕ ಮೃತದೇಹವನ್ನು ದಾವಣಗೆರೆ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನವೀನ್ ವೈದ್ಯನಾಗಬೇಕೆಂಬ ಕನಸು ಕಂಡಿದ್ದರು. ಕುಟುಂಬದವರು ಕೂಡ ವೈದ್ಯ ಮಗನನ್ನು ಸ್ವಾಗತಿಸಲು ಸಜ್ಜಾಗಿದ್ದರು. ಆದರೆ ಈಗ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಗನ ಮೃತದೇಹವನ್ನು ಹಸ್ತಾಂತರ ಮಾಡುವಂತಾಗಿದೆ.
ಕುಟುಂಬದವರ ಆಶಯದಂತೆ ಅಂತಿಮ ವಿಧಿವಿಧಾನ ಮೆರವಣಿಗೆಯ ಬಳಿಕ ಚಳಗೇರಿ ಬಸ್ ನಿಲ್ದಾಣದ ಬಳಿ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ.